ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಕೊನೆಗೂ ಜಾಮೀನು ಸಿಕ್ಕಿದೆ.
ಐಷಾರಾಮಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಆರ್ಯನ್ ಖಾನ್ಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಆರ್ಯನ್ ಖಾನ್ 22 ದಿನಗಳ ಜೈಲು ವಾಸದ ಬಳಿಕ ಬಿಡುಗಡೆಗೊಂಡಿದ್ದಾರೆ.
ಆರ್ಯನ್ ಪರ ವಕೀಲರಾದ ಮುಕುಲ್ ರೊಹ್ಟಗಿ ಅವರು ಅರ್ಜಿ ವಿಚಾರಣೆ ವೇಳೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುಮ್ ಧಮೇಚಾಗೂ ಜಾಮೀನು ಮಂಜೂರು ಮಾಡಿದೆ.
ಎನ್ಸಿಬಿ ಪರ ಎಎಸ್ಜಿ ಅನಿಲ್ ಸಿಂಗ್ ವಾದಮಂಡನೆ ಮಾಡಿದ್ದು, ಆರ್ಯನ್ ಖಾನ್ ಡ್ರಗ್ಸ್ ದಂಧೆಯ ಬಗ್ಗೆ ದಾಖಲೆ ಇದೆ. ಆರ್ಯನ್ ವಾಟ್ಸಾಪ್ ಚಾಟ್ ನಿಂದ ವಾಣಿಜ್ಯ ಉದ್ದೇಶಕ್ಕೆ ಡ್ರಗ್ಸ್ ಇಟ್ಟುಕೊಂಡಿದ್ದರು ಎಂಬುದು ಪತ್ತೆ ಆಗಿದೆ. ಹೀಗಾಗಿ ಆರ್ಯನ್ ಖಾನ್ ಗೆ ಆರ್ಯನ್ ಗೆ ಜಾಮೀನು ನೀಡಬಾರದು ಎಂದು ವಾದಿಸಿದರು.
ಆದರೆ ಆರ್ಯನ್ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು, ವಾಟ್ಸಪ್ ಚಾಟ್ ಗೂ ಇಡೀ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆರ್ಯನ್ ಖಾನ್ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ ಎಂದು ವಾದಿಸಿದರು.










