ಐವರು ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಅದ್ದೂರಿ ಸ್ವಾಗತ…

90
firstsuddi

ಮಂಗಳೂರು : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯು.ಟಿ. ಖಾದರ್ ನಿನ್ನೆ ಅದ್ಧೂರಿ ಸ್ವಾಗತ ಕೋರಿದರು.

ಕಾರವಾರದಿಂದ ಕಯಾಕ್ ಮೂಲಕ ಹೊರಟ ಈ ಐದು ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವತಿಯರ ತಂಡವು ನಿನ್ನೆ ಉಳ್ಳಾಲ ಕಡಲ ತೀರಕ್ಕೆ ಬಂದು ಈ ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಿತು. ಈ ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ, ಕಯಾಕಿಂಗ್ ಯಾನ ಮಾಡಿ ಮಂಗಳೂರಿನ ಉಳ್ಳಾಲದ ಕಡಲ ತೀರವನ್ನು ತಲುಪಿದರು.

ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ನಡೆಸಲಾಗಿತ್ತು. ಅವರ ಈ ಯಾತ್ರೆಗೆ 2021ರ ಆಗಸ್ಟ್ 16 ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಈ ಯಾತ್ರೆಯು ಸುಮಾರು 70 ದಿನಗಳ ಸಾಹಸ ಯಾತ್ರೆಯಾಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ಸಮಾನತೆ, ಶ್ರೀ ಸಬಲೀಕರಣ ತತ್ತ್ವವನ್ನು ಬಿಂಬಿಸುವ ವಿಭಿನ್ನವಾದ ಕಾರ್ಯಕ್ರಮವಾಗಿದೆ.