ಕಾರವಾರ: ಡಿ.ಕೆ ಶಿವಕುಮಾರ್ ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ ಗೆ ಮೈಸೂರಿನಿಂದ ಡಿ.ಕೆ ಶಿವಕುಮಾರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ಇಂದು ನಡೆದಿದೆ.
ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಡಿಕೆಶಿ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ವೇಳೆ, ಹೆಲಿಪ್ಯಾಡ್ ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಕ್ಕೂರಿನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿತ್ತು. ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ಹೆಚ್ಎಎಲ್ನಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.










