ಜಲ್ಲಿಕಟ್ಟುಗೆ ತಮಿಳುನಾಡು ಸರ್ಕಾರ ನೀಡಿರುವ ಕಾನೂನಿನ ಮಾನ್ಯತೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್…

67
firstsuddi

ನವದೆಹಲಿ: ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ‘ಜಲ್ಲಿಕಟ್ಟು’ ಮತ್ತು ಕಂಬಳ ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ಸಂವಿಧಾನಪೀಠ ವಜಾಗೊಳಿಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, “ನಾವು ಶಾಸಕಾಂಗದ ದೃಷ್ಟಿಕೋನವನ್ನು ಅಡ್ಡಿಪಡಿಸುವುದಿಲ್ಲ ಮತ್ತು ಶಾಸಕಾಂಗವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂಬ ಅಭಿಪ್ರಾಯವನ್ನು ತೆಗೆದುಕೊಂಡಿದೆ. ಹಾಗೆ, ಮುನ್ನುಡಿಯಲ್ಲಿ ಇದನ್ನು ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಭಾಗವೆಂದು ಘೋಷಿಸಲಾಗಿದೆ” ಎಂದೂ ತಿಳಿಸಿದ್ದಾರೆ.

2017ರಲ್ಲಿ ತಮಿಳುನಾಡು ಸರ್ಕಾರವು ಕೇಂದ್ರ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯದಲ್ಲಿ ಜಲ್ಲಿಕಟ್ಟುಗೆ ಅನುಮತಿ ನೀಡುವ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯದ ಈ ಕ್ರಮವನ್ನು ಪ್ರಾಣಿ ಹಕ್ಕುಗಳ ಸಂಸ್ಥೆ ಪೇಟಾ ಪ್ರಶ್ನಿಸಿ, ಇದು ಅಸಂವಿಧಾನಿಕ ಎಂದು ವಾದಿಸಿ ಅರ್ಜಿ ಸಲ್ಲಿಸಿತ್ತು.

ಜಲ್ಲಿಕಟ್ಟು ಒಂದು ಗೂಳಿ ಪಳಗಿಸುವ ಕ್ರೀಡೆಯಾಗಿದ್ದು ಇದನ್ನು “ಎರುತಝುವುತಲ್” ಎಂದೂ ಕರೆಯಲಾಗುತ್ತದೆ. ಕ್ರೀಡೆಯು ಯುವಕರು ಸಾಧ್ಯವಾದಷ್ಟು ಕಾಲ ಅದರ ಮೇಲೆ ನೇತಾಡುವ ಮೂಲಕ ಗೂಳಿಯನ್ನು ಪಳಗಿಸಲು ಪ್ರಯತ್ನಿಸುವುದನ್ನು ಒಳಗೊಂಡಿರುತ್ತದೆ. ತಮಿಳುನಾಡಿನಲ್ಲಿ ಪೊಂಗಲ್ ಸುಗ್ಗಿಯ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಇದನ್ನು ಆಡಲಾಗುತ್ತದೆ.