ಕಮರಿಗೆ ಬಿದ್ದ ಕ್ರೂಸರ್- 7 ಕಾರ್ಮಿಕರು ಸಾವು…

71
firstsuddi

ಶ್ರೀನಗರ: ಕ್ರೂಸರ್ ವಾಹನವೊಂದು ಕಮರಿಗೆ ಬಿದ್ದು 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಸುದೇಶ್ ಕುಮಾರ್, ಅಖ್ತರ್ ಹುಸೇನ್, ಅಬ್ದುಲ್ ರಶೀದ್, ಮುಬ್ಶರ್ ಅಹ್ಮದ್, ಇಟ್ವಾ, ರಾಹುಲ್ ಮತ್ತು ಕರಣ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಡಾ. ದೇವಾಂಶ್ ಯಾದವ್ ಹೇಳಿದರು.

ಇಲ್ಲಿನ ದಂಗದೂರು ಅಣೆಕಟ್ಟು ಸಮೀಪ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾಮಗಾರಿ ಸ್ಥಳದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ದಚನ್ ಗ್ರಾಮದಲ್ಲಿ ಸುಮಾರು 10 ಮಂದಿ ಕಾರ್ಮಿಕರು ಕಾಮಗಾರಿ ಸ್ಥಳಕ್ಕೆ ಕ್ರೂಸರ್ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಆಳದ ಕಮರಿಗೆ ಬಿದ್ದಿದೆ.

ಕ್ರೂಸರ್ ಕಂದಕಕ್ಕೆ ಉರುಳಿದ ಸುದ್ದಿಯಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಿಶ್ತ್ವಾರ್ ಉಪ ಪೊಲೀಸ್ ಆಯುಕ್ತ ಡಾ. ದೇವಾಂಶ್ ಯಾದವ್ ತಿಳಿಸಿದ್ದಾರೆ.

ಅಪಘಾತದ ಬಗ್ಗೆ ತಿಳಿದ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಕಿಶ್ತ್ವಾರ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.