ಹಾವೇರಿ: ವ್ಯಕ್ತಿಯೊಬ್ಬ ತಾನೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಘಟನೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.
ಮೂಡೂರು ಗ್ರಾಮದ ದೀಪಾ ಮಂಜಪ್ಪ ಗೊಂದಿ(21) ಮೃತ ದುರ್ದೈವಿ. ಹತ್ಯೆಗೈದ ಆರೋಪಿಯನ್ನು ಮಾಲತೇಶ್ ಬಾರ್ಕಿ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಆರೋಪಿ ಮಾಲತೇಶ್, ಸೊಸೆ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ನಂತರ ಮಾವನೊಂದಿಗೆ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಎಂದು ತಿಳಿದು ಬಂದಿದೆ.
ಏ.22 ರಂದು ಮದುವೆ ಫಿಕ್ಸ್ ಆಗಿತ್ತು. ತಕ್ಷಣ ಮದುವೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಲತೇಶ್ ಯುವತಿಯನ್ನು ಸಮೀಪದ ತೋಟವೊಂದಕ್ಕೆ ಕರೆದೊಯ್ದು ಆಕೆಗೆ ವಿಷ ಕುಡಿಸಿದ್ದಾನೆ. ಬಳಿಕ ಆಕೆಗೆ ನೇಣು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಆರೋಪಿ ಮಾಲತೇಶ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










