ತುಮಕೂರು: ಸಿದ್ದಗಂಗಾ ಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ತುಮಕೂರಿನ ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗಾ ಹಳೆಮಠದ ಆವರಣದಲ್ಲಿ ಚಿರತೆ ಕಾಣಿಸಿದೆ. ಶನಿವಾರ ಮಧ್ಯರಾತ್ರಿ 11:30ರ ವೇಳೆಗೆ ಚಿರತೆ ಆವರಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಠದ ಸ್ಮೃತಿ ವನದ ಬಳಿ ಚಿರತೆ ಕಾಣಿಸಿಕೊಂಡಿದ್ದು ಆವರಣದಲ್ಲಿದ್ದ ನಾಯಿಯೊಂದು ಬೊಗಳಿದ ನಂತರ ಅಲ್ಲಿಂದ ಓಡಿ ಹೋಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಮಠದ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡಿದ ಸ್ಥಳ ಪರಿಶೀಲಿಸಿದ ನಂತರ ಸೆರೆಗೆ ಬೋನು ಅಳವಡಿಸಿದ್ದಾರೆ. ನಾಯಿ ಬೇಟೆಯಾಡಲು ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿಆಗಾಗ ಚಿರತೆ, ಕರಡಿಗಳು ಗ್ರಾಮಗಳಿಗೆ ಬರುತ್ತಿರುತ್ತವೆ.










