
ಬೆಂಗಳೂರು: ಭಾರತೀಯ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಸಂಗ್ರಹಕಾರ ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರುಪಾಯಿ ವಂಚಿಸಿದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಕಲಬುರಗಿ ವಿದ್ಯಾನಗರದ ಲಕ್ಷ್ಮಿಕಾಂತ ಹೊಸಮನಿ, ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕುಲಪ್ಪಸಿಂಗೆ, ಉತ್ತರಹಳ್ಳಿಯ ಮುರಳಿ ಎಂದು ಹೇಳಲಾಗಿದೆ. ವಂಚನೆಗೊಳಗಾದ ಆಲಮೇಲದ ಹುಸೇನಪ್ಪ ಮಾಡ್ಯಾಳ ಸಿಸಿಬಿ ಠಾಣೆಗೆ ದೂರು ನೀಡಿದ್ದು, ಸಿಸಿಬಿ ಇನ್ಸ್ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡ ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಸಮೀಪ ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರಗಿಯ ಲಕ್ಷ್ಮಿಕಾಂತ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಂಪರ್ಕವಿದೆ ಎಂದು ಹೇಳಿಕೊಂಡು ನಿರುದ್ಯೋಗಿಗಳಿಗೆ ಯಾಮಾರಿಸ್ಸಿದ್ದ. ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದು, ತಲಾ ಒಬ್ಬರಿಂದ 20 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದ. ನಕಲಿ ನೇಮಕಾತಿ ಆದೇಶವನ್ನು ಈ ತಂಡ ವಿತರಿಸಿದ್ದಾರೆ. ಬಳಿಕ ಐವರು ಆರೋಪಿಗಳು ರೈಲ್ವೇ ನೌಕರರಂತೆ ನಟಿಸಿ ನಾಸಿಕ್ ಮತ್ತು ಉತ್ತರಪ್ರದೇಶದಲ್ಲಿ ನಕಲಿ ತರಬೇತಿ ನೀಡಿದ್ದಾರೆ. ನಂತರ ಉದ್ಯೋಗ ಸಿಕ್ಕ ಖುಷಿಯಲ್ಲಿ ಮುಂಬೈ ಮತ್ತು ಕಾನ್ಪುರಕ್ಕೆ ವರದಿ ಮಾಡಲು ಹೋದಾಗ ನೇಮಕಾತಿ ನಕಲಿ ಎಂಬುದು ತಿಳಿದುಬಂದಿದೆ. ಬಳಿಕ ಹಣ ವಾಪಸ್ ನೀಡುವಂತೆ ಆರೋಪಿಗಳನ್ನು ಕೇಳಲಾಗಿದ್ದು, ಈ ವೇಳೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.









