ಬೆಳಗಾವಿ: ತವರು ಮನೆಯಿಂದ ಪತ್ನಿ ಬಾರದಿದ್ದಕ್ಕೆ ಪತಿಯೊಬ್ಬ ಪತ್ನಿಯ ತುಟಿ, ಮೂಗನ್ನು ಕತ್ತರಿಸಿರುವ ಘಟನೆ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಪರಶುರಾಮ್ ನಾಯಿಕ್ ಎಂಬಾತ ಪತ್ನಿಯ ಮೂಗು ಕತ್ತರಿಸಿರುವ ಪತಿ. ಸುನಿತಾ ಸುರೇಶ್ ನಾಯಿಕ್(27) ಹಲ್ಲೆಗೊಳಗಾದ ಪತ್ನಿ. ಇವರಿಬ್ಬರ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಹೀಗಾಗಿ ಪತ್ನಿ ತವರು ಮನೆಗೆ ಬಂದಿದ್ದಳು. ಪತ್ನಿಯನ್ನು ವಾಪಸ್ಟು ಕರೆದುಕೊಂಡು ಹೋಗಲೆಂದು ಪತಿ ಬಂದಿದ್ದಾಗ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಸುರೇಶ್ ನಾಯಿಕ್ ಪತ್ನಿಯ ತುಟಿ, ಮೂಗನ್ನು ಕತ್ತರಿಸಿ ಬಳಿಕ ಪರಾರಿಯಾಗಿದ್ದಾನೆ .ಗಾಯಾಳು ಸುನಿತಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುರೇಶ್ಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದು, ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










