ಬೆಂಗಳೂರು: ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಎರಡನೇ ದಿನವಾದ ಇಂದು ಕೂಡ ಮುಂದುವರೆದಿದ್ದು, ಹಲವೆಡೆ ದುಷ್ಕರ್ಮಿಗಳು ಬಸ್ಗಳಿಗೆ ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಬೆಂಗಳೂರಿನ ಹಲವೆಡೆ ಸ್ಥಗಿತಗೊಂಡಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಿಂದ ಬೆಂಗಳೂರಿಗೆ ಬರುತ್ತಿದ್ದ ಐದು ಸರ್ಕಾರಿ ಬಸ್ಗಳ ಮೇಲೆ ತಾವರೆಕೆರೆಗೆ ಬಳಿ ಕಲ್ಲುತೂರಾಟ ನಡೆದಿದ್ದು, ಇದರಿಂದಾಗಿ ಮಾಗಡಿಯಿಂದ ತೆರಳಬೇಕಿದ್ದ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.ಇದರಿಂದಾಗಿ ಸಾವಿರಾರು ಮಂದಿ ಸಂಚಾರ ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.










