ಚಾಮರಾಜನಗರ : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಅಂಕಶೆಟ್ಟಿಪುರದಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ತ್ರಿವೇಣಿ ಎಂದು ಗುರುತಿಸಲಾಗಿದೆ. ತ್ರಿವೇಣಿ ಅವರು ಕಳೆದ ಒಂದು ವರ್ಷದ ಹಿಂದೆ ಅಂಕಶೆಟ್ಟಿ ಗ್ರಾಮದ ರಾಜೇಂದ್ರ ಎಂಬುವವರೊಂದಿಗೆ ವಿವಾಹವಾಗಿತ್ತು. ವಿವಾಹವಾದ ಕೆಲವು ತಿಂಗಳು ಸುಮ್ಮನಿದ್ದ ಗಂಡನ ಮನೆಯವರು ಬಳಿಕ ಪ್ರತಿನಿತ್ಯ ಗಂಡನೂ ಸೇರಿದಂತೆ ಮನೆಯವರೆಲ್ಲರೂ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮೃತ ತ್ರಿವೇಣಿಯ ಪೋಷಕರು ಆರೋಪಿಸಿದ್ದು, ಪತಿ ರಾಜೇಂದ್ರ ಹಾಗೂ ಅವರ ಮನೆಯವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಮೃತ ಗೃಹಿಣಿ ತನಗೆ ಪತಿಯ ಮನೆಯವರು ಹೇಗೆಲ್ಲಾ ಕಿರುಕುಳ ನೀಡುತ್ತಿದ್ದರು ಎಂದು ಡೈರಿಯಲ್ಲಿ ಬರೆದಿಟ್ಟಿದ್ದು, ಸದ್ಯ ಪೊಲೀಸರು ಆ ಡೈರಿ ಹಾಗೂ ಪತಿಯ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.










