ಖಜುರಾಹೊ(ಮಧ್ಯಪ್ರದೇಶ) : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಧಾರ್ಮಿಕ ಗುರು ಕಾಳಿಚರಣ್ ಮಹಾರಾಜ್ ರನ್ನು ಬಂಧಿಸಲಾಗಿದೆ.
ಮಧ್ಯಪ್ರದೇಶದ ಖಜುರಾಹೊದಿಂದ ಸುಮಾರು 25 ಕಿಮೀ ದೂರದಲ್ಲಿರುವ ಭಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ಸ್ವಾಮೀಜಿ ಮಹಾರಾಜ್ ತಂಗಿದ್ದರು. ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಮಹಾರಾಜ್ ಅವರನ್ನು ರಾಯ್ಪುರ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 26 ರಂದು ರಾಯ್ಪುರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್, 1947ರಲ್ಲಿ ದೇಶ ವಿಭಜನೆಯಾಗಲು ಮಹಾತ್ಮ ಗಾಂಧಿ ಕಾರಣ. ಅವರು ದೇಶವನ್ನು ನಾಶಪಡಿಸಿದರು ಎಂದು ಹೇಳುತ್ತಾ ಗಾಂಧೀಜಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಹೊಗಳಿದ್ದರು.
ಕಾಳಿಚರಣ್ ಹೇಳಿಕೆಗಳಿಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಕಾಳಿಚರಣ್ ಮಹಾರಾಜ್ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.










