ಚಿಕ್ಕಮಗಳೂರು : ರಾಮಾಂಜನೇಯಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜೆ…

214
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಚಿಕ್ಕಗೌಜದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಗ್ರಾಮ ದೇವತೆ ಶ್ರೀ ರಾಮಾಂಜನೇಯಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಇಂದು 48ನೇ ದಿನದ ಮಂಡಲ ಪೂಜೆ ನೂರಾರು ಭಕ್ತರ ನಡುವೆ ವೈಭವದಿಂದ ಜರುಗಿತು.
ಮಂಡಲ ಪೂಜೆ ಅಂಗವಾಗಿ ಬೆಳಿಗ್ಗೆ ಪುಣ್ಯಾಹ, ನವಕಳಶ ಸ್ಥಾಪನೆ, ವಿಮಾನಾಂಗ ಹೋಮ, ಅಧಿದೇವತಾ ಹೋಮ, ಧ್ವಜಗಾಯತ್ರಿ ಹೋಮ, ರಾಮತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಶ್ರೀ ಬಸವೇಶ್ವರ ಮತ್ತು ರಾಮಾಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನಡೆದವು.

ಹೋಮದ ಪೂರ್ಣಾಹುತಿಯ ನಂತರ ಮಧ್ಯಾಹ್ನ ಉತ್ಸವ ಮೂರ್ತಿಯ ಪ್ರಾಕಾರೋತ್ಸವ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು, ಇದೇ ವೇಳೆ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದವರನ್ನು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಅರಸೀಕೆರೆಯ ಮಾಲೆಕಲ್ ತಿರುಪತಿ ದೇವಾಲಯದ ಪ್ರಧಾನ ಅರ್ಚಕ ರಾಮಪ್ರಸಾದ್ ನೇತೃತ್ವದ ಅರ್ಚಕರ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತು, ಸುತ್ತಮುತ್ತಲ ಏಳು ಹಳ್ಳಿಗಳ ಗೌಡರು ಹಾಗೂ ಗ್ರಾಮಸ್ಥರು ಮಂಡಲ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಸಮಿತಿಯ ಕಾರ್ಯಾಧ್ಯಕ್ಷ ಮಾಸ್ತೇಗೌಡ, ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷ ನಾಗೇಗೌಡ, ಪದಾಧಿಕಾರಿಗಳಾದ ಸಣ್ಣೇಗೌಡ, ಅಣ್ಣೇಗೌಡ, ಸುರೇಶ್, ತಿಮ್ಮೇಗೌಡ, ಶಾಂತಕುಮಾರ್, ದೇವೇಗೌಡ, ಜಗದೀಶ್, ಪರಮೇಶ್ವರಪ್ಪ ಹಾಜರಿದ್ದರು.