ಚಿಕ್ಕಮಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಮಂಗಳವಾದ್ಯ ಕಲಾವಿದರಿಗೆ ಆರ್ಥಿಕ ನೆರವು ನೀಡುವಂತೆ ಮಂಗಳವಾದ್ಯ ಸಂಘ ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಮಾಡಿದೆ.
ಶಾಸಕ ಸಿ.ಟಿ.ರವಿಯವರ ಗೃಹಕಛೇರಿಗೆ ಇಂದು ತೆರಳಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ರಾಜ್ಯಸರ್ಕಾರದಿಂದಲೂ ಆರ್ಥಿಕ ನೆರವು ಒದಗಿಸುವಂತೆ ಒತ್ತಾಯಿಸಿದರು.
ಕೊರೊನಾ ಮಹಾಮಾರಿ ಆರಂಭವಾದಾಗಿನಿಂದಲೂ ಶುಭಸಮಾರಂಭಗಳು ನಡೆಯದೆ ಇರುವುದರಿಂದಾಗಿ ಕಳೆದ ಒಂದು ವರ್ಷದಿಂದ ಮಂಗಳವಾದ್ಯ ಕಲಾವಿದರು ಮತ್ತು ಕಾರ್ಮಿಕರು ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುತ್ತಿ ದ್ದಾರೆ ಎಂದು ತಿಳಿಸಿದರು.
ಮಂಗಳವಾದ್ಯ ಕಲಾವಿದರು ಮತ್ತು ಕಾರ್ಮಿಕರಿಗೆ ಮಂಗಳವಾದ್ಯ ನುಡಿಸುವುದನ್ನು ಬಿಟ್ಟು ಬೇರೆ ಕಸುಬು ಗೊತ್ತಿಲ್ಲದಿರುವುದರಿಂದಾಗಿ ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೇ ಕಂಗಾಲಾಗಿದ್ದಾರೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ತಾವು ಆರ್ಥಿಕ ನೆರವು ನೀಡುವುದರ ಜೊತೆಗೆ ಸರ್ಕಾರದಿಂದಲೂ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ಹೇಳಿದರು.
ಮಂಗಳವಾದ್ಯ ಸಂಘದ ಗೌರವಾಧ್ಯಕ್ಷ ವಿ.ಮಂಜುನಾಥ್, ಖಜಾಂಚಿ ದಯಾನಂದ್, ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ ಹಾಜರಿದ್ದರು.










