ಯಾದಗಿರಿ : ವಿದ್ಯುತ್ ಕಡಿತದಿಂದ ಸೋಂಕಿತರು ಪರದಾಡಿರುವ ಘಟನೆ ತಾಲ್ಲೂಕಿನ ಮುದ್ನಾಳ್ ಬಳಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಎರಡು ಘಂಟೆಯಿಂದ ಕರೆಂಟ್ ಇಲ್ಲದೇ, ಆಕ್ಸಿಜನ್, ವೆಂಟಿಲೆಟರ್ ಬಂದ್ ಆಗಿದ್ದರಿಂದ ಸೋಂಕಿತರು ಪರದಾಡುತ್ತಿದ್ದಾರೆ.
ದಿಢೀರನೇ ಪವರ್ ಕಟ್ ಆಗಿದ್ದರಿಂದ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಬಂಧಿಕರು ಬಟ್ಟೆಯಲ್ಲಿ ಗಾಳಿ ಬೀಸುತ್ತಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಜನರೆಟರ್ ವ್ಯವಸ್ಥೆ ಇದ್ದರೂ ಡೀಸೆಲ್ ಇಲ್ಲ. ಜಿಲ್ಲಾಡಳಿತದ ದೊಡ್ಡ ಎಡವಟ್ಟಿಗೆ ಸೋಂಕಿತರ ಸಂಬಂಧಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಕರೆಂಟ್ ಕಟ್ ಆಗಿದ್ದರಿಂದ ಸೋಂಕಿತರು ನರಕಯಾತನೆ ಅನುಭವಿಸುತ್ತಿದ್ದಾರೆ.










