ಮೈಸೂರು : ಮಂಗಳೂರಿನಲ್ಲಿ ಗಲಭೆ ಸೃಷ್ಟಿಸಿದವರು ಸಿದ್ದರಾಮಯ್ಯ ಅವರು ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು ಎಂದು ಸಂಸದ ಪ್ರತಾಪ್ ಸಿಂಹ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೀಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕಲ್ಲುಗಳನ್ನು ಮೂಟೆಕಟ್ಟಿ ತಂದು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದವರನ್ನು ಸಿದ್ದರಾಮಯ್ಯ ಅವರು ಅಮಾಯಕರು ಎಂದು ಹೇಳಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿಯಾದರೂ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅವರು ತಿಳಿದುಕೊಳ್ಳಲಿ. ಅವರ್ಯಾರು ಅಮಾಯಕರಲ್ಲ. ಆಸ್ಪತ್ರೆಗೆ ಹೋಗಿ ರೋಗಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇವರೆಲ್ಲ ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು. ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅವರು ಮಂಗಳೂರಿಗೆ ಗನಂಧಾರಿ ಕೆಲಸ ಮಾಡಲು ಹೋಗಿರಲಿಲ್ಲ. ತಮ್ಮ ಮರಿಟಿಪ್ಪುಗಳು ಮಾಡಿರುವ ತಪ್ಪನ್ನು ಮರೆಮಾಚಲು ಹೋಗಿದ್ದರು ಎಂಬುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.










