ಮಂಡ್ಯ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರ ಅಂತ್ಯಸಂಸ್ಕಾರ ಇಂದು ಬೆಳಗ್ಗೆ ಒಕ್ಕಲಿಗರ ಸಂಪ್ರದಾಯದಂತೆ ಹುಟ್ಟೂರಾದ ಕೊತ್ತಮಾರನಹಳ್ಳಿಯಲ್ಲಿ ನೆರವೇರಿಸಲಾಯಿತು. ಹಲವು ದಿನಗಳಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೃಷ್ಣ ಅವರು ನಿನ್ನೆ ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ನಿಧರಾಗಿದ್ದರು.
ಸರಳ ಸಜ್ಜನತೆಗೆ ಹೆಸರಾಗಿದ್ದ ಕೃಷ್ಣ ಅವರನ್ನು ‘ಮಂಡ್ಯದ ಗಾಂಧಿ’ ಎಂದೇ ಕರೆಯಲಾಗುತ್ತಿತ್ತು. ಕೆ.ಆರ್.ಪೇಟೆ ರಸ್ತೆಯ ಎರಡು ಬದಿಯಲ್ಲಿ ನಿಂತು ಸಾವಿರಾರು ಅಭಿಮಾನಿಗಳು ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಕೃಷ್ಣ ಅವರು ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕೊತ್ತಮಾರನಹಳ್ಳಿ ಗ್ರಾಮದವರು. ಮೂರು ಬಾರಿ ಕೆ.ಆರ್.ಪೇಟೆ ಕ್ಷೇತ್ರದಿಂದ ಶಾಸಕರಾಗಿದ್ದು, 1996ರಲ್ಲಿ ಮಂಡ್ಯದ ಸಂಸದರಾಗಿ ಆಯ್ಕೆಯಾಗಿದ್ದರು.










