ಹೌದು, ನಾನು ಲಕ್ಕಿ ಡಿಪ್ ಸಿಎಂ.. ಏನೀಗ? : ಬಿಜೆಪಿ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ…

46
firstsuddi

ಬೆಂಗಳೂರು : ಹೌದು, ನಾನು ಲಕ್ಕಿ ಡಿಪ್ ಸಿಎಂ.. ಏನೀಗ? ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯೇ? ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ? ಲಕ್ಕಿ ಡಿಪ್ ಸಿಎಂ ಎಂದರೆ ನನಗೆ ಅಪಮಾನವೇನೂ ಅಲ್ಲ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ‘ಆಪರೇಷನ್ ಕಮಲದ ಸಿಎಂ’ ಎನ್ನುವುದಕ್ಕಿಂತ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ ಎಂದು ಕುಮಾರಸ್ವಾಮಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಅಧಿಕಾರದ ನೆರಳೂ ಕಾಣದೆ ಬೆಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಕುರ್ಚಿರುಚಿ ತೋರಿಸಿದ ಅಂದಿನ 20:20 ಸರ್ಕಾರದ ಡಿಸಿಎಂ ಆಗಿದ್ದ ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟು ಲಕ್ಕಿ ಡಿಪ್ ಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ, ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು, ಅರಿವಾಗುತ್ತದೆ ನಿಮ್ಮ ಅಂಕೆಷ್ಟು, ಡೊಂಕೆಷ್ಟು!!. ʼಮಿಷನ್ ದಕ್ಷಿಣ್ʼ ಮೂಲ ತಾತ್ಪರ್ಯ ಏನು? ಮೈಸೂರಿನಲ್ಲಿ ಯೋಗಾಸನ, ಹೈದರಾಬಾದ್ನಲ್ಲಿ ಮಂಥನ. ಅದರ ಮರ್ಮ ಅರಿಯದವರು ಯಾರೂ ಇಲ್ಲ. ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜೊತೆ ಬರಲು ರೆಡಿ ಇದ್ದ ಆ ನಿಮ್ಮ ನಾಯಕರನ್ನು ನಾನೇ ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಆವತ್ತೇ ನಡುನೀರಿನಲ್ಲಿ ಮುಳುಗಿಹೋಗುತ್ತಿದ್ದಿರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ. ನನ್ನ ನಡುಕದ ಬಗ್ಗೆ ಆಮೇಲೆ ಮಾತನಾಡಿ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.

ಕುಟುಂಬ ರಾಜಕಾರಣದ ಕೊಂಡಿಗಳ ಬಗ್ಗೆ ಹೇಳಿದ್ದೀರಿ. ಈಗಾಗಲೇ ಪಟ್ಟಿ ಕೊಟ್ಟಿದ್ದೇನೆ. ಮತ್ತೆ ನಿಮ್ಮ ಅವಗಾಹನೆಗೆ, ಇಲ್ಲಿದೆ ನೋಡಿ. 1. ಯಡಿಯೂರಪ್ಪ & ಸನ್ಸ್, 2. ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, 3. ಅಶೋಕ್-ರವಿ, 4. ವಿ.ಸೋಮಣ್ಣ-ಅರುಣ್ ಸೋಮಣ್ಣ,5. ಅರವಿಂದ ಲಿಂಬಾವಳಿ-ರಘು, 6. ಎಸ್.ಆರ್.ವಿಶ್ವನಾಥ್-ವಾಣಿ ವಿಶ್ವನಾಥ್, 7. ಜಗದೀಶ ಶೆಟ್ಟರ್-ಪ್ರದೀಪ್ ಶೆಟ್ಟರ್, 8. ಮುರುಗೇಶ ನಿರಾಣಿ-ಹನುಮಂತ ನಿರಾಣಿ, 9. ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್, 10. ಜಾರಕಿಹೊಳಿ ಕುಟುಂಬ,11. ಕತ್ತಿ ಕುಟುಂಬ, 12. ಜೊಲ್ಲೆ ಕುಟುಂಬ, 13. ಅಂಗಡಿ ಕುಟುಂಬ, 14. ಉದಾಸಿ ಕುಟುಂಬ,15. ಶ್ರೀರಾಮುಲು ಕುಟುಂಬ,16. ರೆಡ್ಡಿ ಬ್ರದರ್ಸ್.

ನಿಮ್ಮ ಪರಿವಾರ ಪುರಾಣ ಇನ್ನೂ ಇದೆ. ‘ಬಿಜೆಪಿ ಕುಟುಂಬ ಕೊಂಡಿಗಳ ಆಡಂಬೋಲ’ ಎನ್ನುವುದೂ ಗೊತ್ತಿದೆ. ರಾಷ್ಟ್ರವ್ಯಾಪಿ ವ್ಯಾಪಿಸಿರುವ ಕಮಲದ ಕುಟುಂಬವ್ಯಾಧಿ ಕೊಂಡಿಗಳನ್ನು ಬಿಚ್ಚಬೇಕೆ? ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೌರಿಶಂಕರದಷ್ಟು ಎತ್ತರ ಕಾಣುವ ‘ಬಿಜೆಪಿ ಪರಿವಾರ ಪರ್ವತ’ಗಳ ಬಗ್ಗೆ ಹೇಳಬೇಕಾದರೆ ‘ಪರಿವಾರಕೋಟಿ’ಯನ್ನೇ ಬರೆಯಬಹುದು ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?
ಲಕ್ಕಿಡಿಪ್ ನಲ್ಲಿ ಗೆದ್ದರೆ ಆಳುತ್ತೇನೆ. ಸೋತರೆ ಅಳುತ್ತೇನೆ. ಲಕ್ಕಿ ಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!? ನಾನೇ ಲಕ್ಕಿಡಿಪ್ ಸಿಎಂ. ಕುಮಾರಸ್ವಾಮಿ ಅವರೇ, ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕಿಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ. ನೀವು ಅದೃಷ್ಟವಂತರು! ಬಿಜೆಪಿ ಟ್ವಿಟ್ಟರ್ ಮೂಲಕ ವ್ಯಂಗ್ಯವಾಡಿದೆ.