ಬಾಗಲಕೋಟೆ: ಅಬಕಾರಿ ಸಚಿವರ ತವರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದಕ್ಕೆ ಐದು ಜನರು ಸೇರಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಂಕರೆಡ್ಡಿ ಶೇಷಪ್ಪನವರಿಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಲಾಗಿದೆ. ಸದ್ಯ ಈ ಕೊಲೆ ಕೇಸ್ನಲ್ಲಿ ಐವರು ಆರೋಪಿಗಳನ್ನು ಕೆರೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಹನುಮಂತ ನೀಲರ್ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸೇವಿಸಿ ವೆಂಕರೆಡ್ಡಿ ಮನೆ ಮುಂದೆ ಪ್ಯಾಕೆಟ್ ಬಿಸಾಡಿ ಹೋಗುತ್ತಿದ್ದರು. ಜೊತೆಗೆ ಕುಡಿದ ಅಮಲಿನಲ್ಲಿ ಕೆಲವರು ವೆಂಕರೆಡ್ಡಿ ಮನೆ ಮುಂದೆ ಜಗಳವಾಡುತ್ತಿದ್ದರು. ಹೀಗಾಗಿ ನಮ್ಮ ಮನೆ ಬಳಿ ಮದ್ಯ ಮಾರಬೇಡಿ ಎಂದು ವೆಂಕರೆಡ್ಡಿ ಹೇಳಿದ್ದರು. ಈ ವಿಚಾರವಾಗಿ ಡಿಸೆಂಬರ್ 21 ರಂದು ವೆಂಕರೆಡ್ಡಿ ಮೇಲೆ ಐವರು ಗ್ಯಾಂಗ್ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದೆ. ಗಾಯಾಳು ವೆಂಕರೆಡ್ಡಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರು, ಚಿಕಿತ್ಸೆ ಫಲಿಸದೆ ವೆಂಕರೆಡ್ಡಿ ಮೃತಪಟ್ಟಿದ್ದಾರೆ.