ಮೈಸೂರು : ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಎನ್ಕೌಂಟರ್ ನಡೆಸಿದ ಪೊಲೀಸರನ್ನು ಟೀಕಿಸುವುದು ಸರಿಯಲ್ಲ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದ್ದಾರೆ. ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರಿಗಳ ಮೇಲೆ ಎನ್ಕೌಂಟರ್ ನಡೆದಿರುವುದು ಸಮಾಧಾನ ತಂದಿದೆ. ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಠಿ ನಡೆಸುವ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಸಹಜವಾಗಿಯೇ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ತಪ್ಪು ಹುಡುಕುವ ಅವಶ್ಯಕತೆ ಇಲ್ಲ. ನಮಗೆಲ್ಲರಿಗೂ ಕಾನೂನಿನ ಪ್ರಕಾರವೇ ಎಲ್ಲಾ ಬಗೆಹರಿಯಬೇಕು ಎಂಬ ಆಸೆ ಇದೆ. ಈಗಾ ಆಗಿರುವ ಎನ್ಕೌಂಟರ್ ಕೂಡಾ ಕಾನೂನು ಪ್ರಕಾರ ಆಗಿದ್ದರೆ ಅದು ತಪ್ಪೇನಿಲ್ಲ ಎಂದು ಹೇಳಿದರು.










