ಇಂದು ಗವಿಸಿದ್ದೇಶ್ವರ ಮಹಾರಥೋತ್ಸವ: ಜಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು.

10

ಕೊಪ್ಪಳ: ನಗರದಲ್ಲಿರುವ ಸುಪ್ರಸಿದ್ಧ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುತ್ತಾರೆ. ಇಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ರಥೋತ್ಸವದೊಂದಿಗೆ ಆರಂಭವಾಗಲಿದೆ. ಮುಂದಿನ 15 ದಿನಗಳ ಕಾಲ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ 3 ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗವಿಮಠದ ಜಾತ್ರೆ, ಕೇವಲ ಜಾತ್ರೆಯಾಗಿರದೆ, ಜ್ಞಾನ, ದಾಸೋಹ, ಅನುಭವ, ಜೀವನ ಚಿಂತನೆಯ ಪಾಠವನ್ನು ತಿಳಿಯುವ ಭಕ್ತಿ ಮತ್ತು ಜ್ಞಾನದ ಸಂಗಮವಾಗಿರುತ್ತದೆ. ಜಾತ್ರೆಗೆ ಬಂದ ಭಕ್ತರು ಜ್ಞಾನದ ಬುತ್ತಿಯನ್ನು ಹೊತ್ತೋಯ್ಯಲಿ ಎಂಬುವುದು ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶಯವಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಜಾತ್ರೆಗೆ ಆಹ್ವಾನಿಸಿ ಸತ್ಕರಿಸಿ, ಅವರ ಕಾರ್ಯವನ್ನು ಗೌರವಿಸುವುದು ಮತ್ತು ಅವರ ಕೊಡುಗೆಯನ್ನು ಜನರಿಗೆ ತಿಳಿಸುವ ಕಾರ್ಯ ಮಠದಿಂದ ನಡೆದುಕೊಂಡು ಬಂದಿದೆ. ಇಂದು ಗವಿಮಠದ ಜಾತ್ರೆಯ ಅಂಗವಾಗಿ ಪ್ರತಿವರ್ಷ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಇಂದು ಸಂಜೆ 5:30ಕ್ಕೆ ಮಠದ ಮುಂದಿರುವ ಮೈದಾನದಲ್ಲಿ, ಮಹಾ ರಥೋತ್ಸವ ನಡೆಯಲಿದೆ. ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ಎಮ್ ವೆಂಕಟೇಶ್ ಕುಮಾರ್ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡಾ ಜಾತ್ರೆಯಲ್ಲಿ ಬಾಗಿಯಾಗಲಿದ್ದಾರೆ. ರಥೋತ್ಸವಕ್ಕೆ ದೇಶದ ಅನೇಕ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.