ಜೈಪುರ : ಉದಯಪುರದಲ್ಲಿ ಟೈಲರ್ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್ಐಎಗೆ(ರಾಷ್ಟ್ರೀಯ ತನಿಖಾ ದಳ) ವಹಿಸಿದೆ.
ರಾಜಸ್ತಾನದ ಉದಯಪುರದಲ್ಲಿ ಟೈಲರ್ ನ ಹತ್ಯೆ ಪ್ರಕರಣವನ್ನು ಅತ್ಯಂತ ಭಯಾನಕ ಎಂದು ಬಣ್ಣಿಸಿರುವ ಗೃಹ ಇಲಾಖೆ ಇದರ ಹಿಂದೆ ಯಾವುದಾದರೂ ಸಂಘಟನೆ ಅಥವಾ ಅಂತಾರಾಷ್ಟ್ರೀಯ ಸಂಘಟನೆಗಳು, ವ್ಯಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ಸಹ ತನಿಖೆ ನಡೆಸಲಿದೆ.
ತನಿಖೆ ಕೈಗೆತ್ತಿಕೊಂಡ ಎನ್ ಐಎ ಪ್ರಕರಣ ದಾಖಲಿಸಿಕೊಂಡು ಇದು ರಾಷ್ಟ್ರೀಯ ಭದ್ರತೆಗೆ ಹಾಕಲಾದ ಬೆದರಿಕೆ ಎಂದು ಪರಿಗಣಿಸಿ ತೀವ್ರ ತನಿಖೆಗೆ ಮುಂದಾಗಿದೆ. ಪ್ರಕರಣದ ಹಿಂದೆ ಯಾವುದೇ ಸಂಘಟನೆ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ಇರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ 31 ಲಕ್ಷ ರೂಪಾಯಿ ಪರಿಹಾರ ಮತ್ತು ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ಘೋಷಿಸಿದೆ.










