ತನ್ನ ನಿವಾಸದಲ್ಲಿ ಮಹದೇವಪ್ಪ ಜೊತೆ ಮಾತುಕತೆ, ತಿಂಡಿ-ಊಟಕ್ಕೂ ಹೋಗಬಾರದೇ: ಪರಮೇಶ್ವರ್.

14

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಅಧ್ಯಕ್ಷ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬೆನ್ನಲ್ಲೇ ಇನ್ನಷ್ಟು ಬೆಳವಣಿಗೆ ನಡೆಯುತ್ತಿದ್ದು ಇಂದು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಮಹದೇಪ್ಪ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಮನೆಯಿಂದ ಹೋಗುವ ವೇಳೆ ಯಾವುದೇ ವಿಚಾರ ಚರ್ಚೆ ನಡೆಸಿಲ್ಲ ಎಂದು ಸುದ್ದಿಗಾರರಿಗೆ ಹೇಳಿ ಹೊರಟರು. ಮಹದೇವಪ್ಪ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ್, ವಿಶೇಷ ಏನಿಲ್ಲ. ಅವರ ವೈಯಕ್ತಿಕ ಕೆಲಸಕ್ಕೆ ಬಂದು ಮಾತನಾಡಿದ್ದಾರೆ. ಯಾಕೆ ಮಾತನಾಡಬಾರದಾ, ಅನೇಕ ಸಮಯದಲ್ಲಿ ಅವರು ಬರುತ್ತಾರೆ. ನಾವು ಹೋಗುತ್ತೇವೆ. ನಾನು ಅನೇಕ ಸಾರಿ ಸಚಿವರ ಮನೆಗೆ ಹೋಗಿದ್ದೇನೆ. ತಿಂಡಿ-ಊಟಕ್ಕೂ ಹೋಗಬಾರದಾ, ಯಾವುದೇ ಚರ್ಚೆ ನಡೆದಿಲ್ಲ ಎಂದರು. ಮಹದೇವಪ್ಪ ವೈಯಕ್ತಿಕ ಕೆಲಸಕ್ಕೆ ಬಂದಿದ್ದರು. ಬೇರೆ ಯಾವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅವರದ್ದೇನೋ ಕೆಲಸ ಇತ್ತು ಬಂದಿದ್ದಾರೆ. ನಾವು ಬೇರೆ ಯವರ ಮನೆಗೆ ತಿಂಡಿಗೆ ಅಥವಾ ಊಟಕ್ಕೆ ಹೋಗುವುದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಅದೆಲ್ಲ ವೈಯಕ್ತಿಕ ಭೇಟಿಗಳು ಎಂದು ಹೇಳಿದರು.