ಬೆಂಗಳೂರು : ಇಂದು 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನೆಲೆ, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಧ್ವಜರೋಹಣ ನೆರವೇರಿಸಿದರು. ದೇಶದಲ್ಲಿ ಅಧಿಕಾರದ ಮೇಲಾಟ ನಡೆಯುತ್ತಿದೆ. ದೇಶದ ಘನ ಸಂವಿಧಾನ, ಬಾಬಾ ಸಾಹೇಬರ ಬಗ್ಗೆಯೂ ಗೌರವ ಇಲ್ಲದಂತಾಗಿದೆ. ಈ ಸಂದಿಗ್ಧದ ಪರಿಸ್ಥಿತಿಯಲ್ಲಿ ಕೋಮುವಾದದ ವಿರುದ್ಧ ಹೋರಾಡಲು ನಾವು ಸಜ್ಜಾಗಬೇಕಿದೆ. ಸಾಮೂಹಿಕ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ. ನಾವು ನೀವೆಲ್ಲಾ ಒಗ್ಗಟ್ಟಿನಿಂದ ಮುನ್ನಡೆಯಬೇಕು. 74 ವರ್ಷದ ಹಿಂದೆ ಕೆಂಪುಕೋಟೆಯ ಮೇಲೆ ಪಂಡಿತ್ ಜವಾಹರಲಾಲ್ ನೆಹರು ಅವರು ಧ್ವಜಾರೋಹಣ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಭಾರತದ ಪ್ರಜೆಗಳಾಗಿ ನಾವು ಬ್ರಿಟಿಷರ ಹಸ್ತಕ್ಷೇಪವಿಲ್ಲದೇ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮುನ್ನಡೆಯುವ ದಾರಿ ಮಾಡಿಕೊಟ್ಟರು. ಗಾಂಧಿಯವರ ತತ್ವಗಳನ್ನ ನಾವು ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನ ಸ್ಮರಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಬೇಕು. ಕಾಂಗ್ರೆಸ್ ಜನ್ಮತಾಳಿದ್ದೇ ಸ್ವಾತಂತ್ರ್ಯಕ್ಕಾಗಿ. ದೇಶದ ಐಕ್ಯತೆಯನ್ನ ನಾವು ಇಂದು ಉಳಿಸಬೇಕಿದೆ ಎಂದರು.










