ಬಿಜೆಪಿ ಸಮಾವೇಶದಲ್ಲಿ ಯು.ಟಿ. ಖಾದರ್‌ ಗೆ ಬೆದರಿಕೆ- ವಿಡಿಯೊ ವೈರಲ್…

210
firstsuddi

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯುವಕರು, ‘ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಅವರ ಕೈ, ಕಾಲು ಕಡಿಯುತ್ತೇವೆ’ ಎಂದು ಬೆದರಿಕೆಯ ಘೋಷಣೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇಸರಿ ವಸ್ತ್ರವನ್ನು ತಲೆಗೆ ಸುತ್ತಿಕೊಂಡು ಘೋಷಣೆ ಕೂಗುತ್ತಿರುವ ಯುವಕರು ತಮ್ಮ ಸುದ್ದಿಗೆ ಬರದಂತೆ ಯುಡಿಎಫ್‌ ಸದಸ್ಯರು ಹಾಗೂ ಶಾಸಕ ಖಾದರ್‌ ಅವರಿಗೆ ಮಲಯಾಳ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ. ‘ಯುಡಿಎಫ್‌ನ ಹಂದಿಗಳೇ ನಮ್ಮ ಸುದ್ದಿಗೆ ಬರಬೇಡಿ. ನಾಯಿ ಮಗನೆ ಖಾದರ್‌ ನಮ್ಮ ಸುದ್ದಿಗೆ ಬರಬೇಡ. ಬಂದರೆ ಕೈ, ಕಾಲು, ತಲೆ ತೆಗೆಯುತ್ತೇವೆ…’ ಎಂದು ಕೇಕೆ ಹಾಕುತ್ತಾ ಕುಣಿಯುತ್ತಿರುವ ದೃಶ್ಯ ವಿಡಿಯೊ ತುಣುಕಿನಲ್ಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಖಾದರ್‌, ‘ಬೆದರಿಕೆ ಹಾಕಿದವರ ವಿರುದ್ಧ ದೂರು ನೀಡುವುದಿಲ್ಲ. ದೂರು ನೀಡಿ, ಜೈಲಿಗೆ ಕಳಿಸಬಹುದು. ಆದರೆ, ಅವರ ತಂದೆ, ತಾಯಂದಿರು ಅನುಭವಿಸುವ ಕಷ್ಟದ ಬಗ್ಗೆ ನನಗೆ ಕನಿಕರವಿದೆ’ ಎಂದರು. ‘ನನ್ನ ತಲೆ ಕಡಿಯುವುದರಿಂದ ಸಂತೋಷ ಆಗುವುದಾದರೆ ಅವರು ಹೇಳಲಿ. ಎಲ್ಲಿಗೆ ಕರೆದರೂ ಬರಲು ನಾನು ಸಿದ್ಧ’ ಎಂದು ಹೇಳಿದರು.