ಮಹಾರಾಷ್ಟ್ರ: ಪ್ರಯಾಗ್ರಾಜ್ಗೆ ಮಹಾಕುಂಭ ಮೇಳಕ್ಕೆಂದು ಭಕ್ತರನ್ನು ಹೊತ್ತು ಹೊರಟಿದ್ದ ತಪತಿ ಗಂಗಾ ಎಕ್ಸ್ಪ್ರೆಸ್ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಸೂರತ್ನಿಂದ ಛಾಪ್ರಾಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ರೈಲು ನಿಲ್ದಾಣದಿಂದ ಹೊರಟ 2 ರಿಂದ 3 ಕಿ.ಮೀಗಳ ಬಳಿಕ ದಾಳಿ ನಡೆದಿದ್ದು, ಬಿ6 ಕೋಚ್ನ ಕಿಟಕಿಗಳಿಗೆ ಹಾನಿಯಾಗಿದೆ. ಪ್ರಯಾಣಿಕರ ಪೈಕಿ ಹಲವರು ಪ್ರಯಾಗರಾಜ್ನಲ್ಲಿ ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದರು. ತಮ್ಮ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದರು. ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀಡಿಯೊವು ರೈಲಿಗಾದ ಹಾನಿಯನ್ನು ತೋರಿಸಿದೆ. ಜಲಗಾಂವ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಚಲಿಸುತ್ತಿದ್ದ ರೈಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲು ಎಸೆದ ಪರಿಣಾಮ ಕಿಟಕಿ ಗಾಜುಗಳು ಒಡೆದಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ವ್ಯಕ್ತಿಯನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ತಪತಿ ಗಂಗಾ ಎಕ್ಸ್ಪ್ರೆಸ್ ಕುಂಭಮೇಳಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಜನಪ್ರಿಯ ರೈಲು. ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮಾರ್ಗದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.










