ಮುಂಬೈ : ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್`ಮುಖ್ ಅವರ ವಿರುದ್ಧ ಸಿಬಿಐ ಎಫ್ ಐರ್ ದಾಖಲಿಸಿದೆ. ಅಲ್ಲದೇ ಅವರಿಗೆ ಸಂಬಂಧಪಟ್ಟ ಹಲವು ಪ್ರದೇಶಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಅನಿಲ್ ದೇಶ್`ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಪತ್ರ ಬರೆದಿದ್ದರು. ಈ ಪತ್ರದ ಅನ್ವಯ ಏಪ್ರಿಲ್.14 ರಂದು ಸಮನ್ಸ್ ಜಾರಿ ಮಾಡಿತ್ತು. ಅಮಾನತುಗೊಂಡ ಎಪಿಐ ಸಚಿನ್ ವಾಜೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ವಸೂಲಿ ಮಾಡುವಂತೆ ಅನಿಲ್ ದೇಶ್`ಮುಖ್ ಹೇಳಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು.
ಇನ್ನೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ, ಅನಿಲ್ ದೇಶ್`ಮುಖ್ ಅವರ ವೈಯಕ್ತಿಕ ಸಹಾಯಕರಾದ ಸಂಜೀವ್ ಪಾಲಂಡೆ ಮತ್ತು ಕುಂದನ್ ಶಿಂಧೆ, ಮಾಜಿ ಪೋಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಇಬ್ಬರು ಚಾಲಕರು, ಬಾರ್ ಮಾಲೀಕರು, ಮುಂಬೈ ಪೊಲೀಸ್ ಅಧಿಕಾರಿಗಳು ಮತ್ತು ಮಾಜಿ ಸಚಿವರಿಗೆ ಹತ್ತಿರವಿರುವ ಜನರನ್ನು ವಿಚಾರಣೆಗೆ ಒಳಪಡಿಸಿದೆ.
ಅನಿಲ್ ದೇಶ್ ಮುಖ್ ವಿರುದ್ದ ಮಾಡಲಾದ ಆರೋಪ ಗಂಭೀರವಾಗಿದ್ದು, ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಏಪ್ರೀಲ್.8ರಂದು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಸಿಬಿಐ ಗಂಭೀರವಾಗಿ ತನಿಖೆ ಕೈಗೊಂಡಿದೆ.










