‘ಮಾರ್ಟಿನ್’ ವಿವಾದ; ನಿರ್ದೇಶಕ ಎಪಿ ಅರ್ಜುನ್‍ಗೆ ಗೆಲುವು.

35

ಬೆಂಗಳೂರು: ನಿರ್ದೇಶಕ ಎಪಿ ಅರ್ಜುನ್ ಹಾಗೂ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಮಧ್ಯೆ ಮನಸ್ತಾಪ ಇದೆ ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಆದರೆ, ಇದನ್ನು ತಂಡ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ತಂಡದವರು ಕೋರ್ಟ್ ಮೆಟ್ಟಿಲನ್ನು ಹತ್ತುತ್ತಲೇ ಇದ್ದಾರೆ. ತಮ್ಮ ಹೆಸರನ್ನು ತಂಡ ಕೈಬಿಟ್ಟಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಆರೋಪಿಸಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಅವರ ಹೆಸರನ್ನು ಸೇರಿಸಬೇಕು ಎಂದು ಆದೇಶ ನೀಡಿದೆ. ಎಪಿ ಅರ್ಜುನ್ ಕಡೆಯಿಂದ ನಿರ್ಮಾಪಕರಿಗೆ ವಂಚನೆ ಆಗಿರೋ ಆರೋಪ ಈ ಮೊದಲು ಕೇಳಿ ಬಂದಿತ್ತು. ವಿಎಫ್‍ಎಕ್ಸ್ ಕೆಲಸಕ್ಕೆ ಕಂಪನಿಯೊಂದಕ್ಕೆ ಡೀಲ್ ಕೊಡಲಾಗಿತ್ತು. ಈ ಡೀಲ್‍ನಲ್ಲಿ ಅರ್ಜುನ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಆರೋಪದ ಬೆನ್ನಲ್ಲೇ ನಿರ್ದೇಶಕರು ಹಾಗೂ ನಿರ್ಮಾಪಕರ ಮಧ್ಯೆ ಮನಸ್ತಾಪ ಉಂಟಾಯಿತು ಎನ್ನಲಾಗಿದೆ. ಪ್ರಚಾರದ ವೇಳೆ ಉದಯ್ ಮೆಹ್ತಾ ಅವರು ಎಪಿ ಅರ್ಜುನ್ ಹೆಸರನ್ನು ಕೈಬಿಟ್ಟ ಆರೋಪ ಕೇಳಿ ಬಂತು. ಈ ಬೆನ್ನಲ್ಲೇ ಎ.ಪಿ.ಅರ್ಜುನ್ ಕರ್ನಾಟಕ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ‘ಸಿನಿಮಾ ಬಿಡುಗಡೆಗೂ ಮುನ್ನ ಸಂಭಾವನೆ ಪಾವತಿ ಮಾಡಬೇಕು, ಪೋಸ್ಟರ್ ಹಾಗೂ ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಉಲ್ಲೇಖಿಸುವಂತೆ ನಿರ್ಮಾಪಕರಿಗೆ ಸೂಚಿಸಿ’ ಎಂದು ಅರ್ಜುನ್ ಪರ ವಕೀಲರು ಕೋರಿದ್ದರು. ಈ ಅರ್ಜಿಯನ್ನು ಹೈಕೋರ್ಟ್‍ನ ರಜಾಕಾಲದ ವಿಭಾಗೀಯ ನ್ಯಾಯಪೀಠದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಮತ್ತು ಎಂ.ಜಿ.ಉಮಾ ವಿಚಾರಣೆ ನಡೆಸಿ, ಅರ್ಜುನ್ ಪರವಾಗಿ ಆದೇಶ ನೀಡಿದೆ. ‘ಮುಂದೆ ಪ್ರಿಂಟ್ ಮಾಡುವ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಸೇರಿಸಿ. ಪ್ರಮೋಷನ್‍ನಲ್ಲಿ ಭಾಗಿ ಆಗಲು ಅವಕಾಶ ನೀಡಿ. ಅರ್ಜುನ್ ಅವರು ತಂಡದ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು’ ಎಂದು ಆದೇಶ ನೀಡಿತು. ಅಕ್ಟೋಬರ್ 11ರಂದು ‘ಮಾರ್ಟಿನ್’ ಸಿನಿಮಾ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಅವರ ಲುಕ್ ಗಮನ ಸೆಳೆದಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ ಅನ್ನೋದು ವಿಶೇಷ.