ಮಂಗಳೂರು : ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾರು ಚಾಲಕನನ್ನು ನಗರ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಉಳ್ಳಾಲ ಕುಂಪಲ ನಿವಾಸಿ ಚರಣ್ (31) ಬಂಧಿತ ಆರೋಪಿ. ನಿನ್ನೆ ಸಂಜೆ ಚರಣ್ ರಾಜ್ ದೇರಳಕಟ್ಟೆಯಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುವಂತೆ ಕಾರನ್ನು ಅತಿ ವೇಗವಾಗಿ, ಅಜಾಗರೂಕತೆಯಿಂದ ಬೇಜವಾಬ್ದಾರಿಯುತವಾಗಿ ಚಲಾಯಿಸಿದ್ದು, ಅಡ್ಡದಿಡ್ಡಿಯಾಗಿ ತುರ್ತು ಸೇವಾ ವಾಹನಕ್ಕೆ ನಿರಂತರವಾಗಿ ಅಡ್ಡಿಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಗಮನಿಸಿದ ನಗರ ಸಂಚಾರ ದಕ್ಷಿಣ ಠಾಣೆಯ ಪೊಲೀಸ್ ಠಾಣಾಧಿಕಾರಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 194(ಇ) ಮೋಟಾರು ವಾಹನ ಕಾಯ್ದೆಯಡಿ ದೂರು ದಾಖಲಿಸಿದ್ದು, ಕಾರು ಚಾಲಕ ಚರಣ್ ನನ್ನು ಬಂಧಿಸಿದ್ದಾರೆ.










