ಉದ್ಯೋಗ ಕೊಡಿಸುವುದಾಗಿ ವಂಚನೆ ; ಸಿನಿಮಾ ನಿರ್ಮಾಪಕ ಅರೆಸ್ಟ್…

47
firstsuddi

ಬೆಂಗಳೂರು : ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ಹಣ ಪಡೆದು, ನಕಲಿ ಆದೇಶ ಪ್ರತಿ ನೀಡಿ ವಂಚಿಸುತ್ತಿದ್ದ ಆರೋಪದಡಿ ಸಿನಿಮಾ ನಿರ್ಮಪಕ ಪ್ರಕಾಶ್ ಎಂಬವರನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆಎಂಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ ಆರೋಪಿ ಪ್ರಕಾಶ್ 10 ಲಕ್ಷ ಹಣ ಪಡೆದಿದ್ದಾರೆ. ಬಳಿಕ ಆ ವ್ಯಕ್ತಿಗೆ ಕೆಎಂಎಫ್ ನಿರ್ದೇಶಕರ ಸಹಿ, ಸರ್ಕಾರಿ ಲಾಂಛನಗಳ ನಕಲಿ ಮಾಡಿ ಆದೇಶ ಪ್ರತಿ ನೀಡಿದ್ದಾರೆ. ಆದೇಶ ಪ್ರತಿ ಹಿಡಿದು ಕೆಎಂಎಫ್ ಗೆ ಹೋದಾಗ ಅದು ನಕಲಿ ಆದೇಶ ಪ್ರತಿ ಎಂಬುವುದು ಪತ್ತೆಯಾಗಿದೆ. ಬಳಿಕ ಕೆಎಂಎಫ್ ಅಧಿಕಾರಿಗಳು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಆರೋಪಿ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮಾಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಇತ್ತೀಚೆಗೆ ನಟ ಪ್ರಮೋದ್ ಶೆಟ್ಟಿ ಅಭಿನಯದಲ್ಲಿ ‘ಶಭಾಷ್ ಬಡ್ಡಿ ಮಗನೇ’ ಹೆಸರಿನ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ಸಿನಿಮಾ ಸೆಟ್ಟೇರಿದ್ದು, ತಮ್ಮ ಪುತ್ರನ ಹೆಸರಿನಲ್ಲೇ ಸಿನಿಮಾ ನಿರ್ಮಾಣವಾಗುತ್ತಿತ್ತು. ಸದ್ಯ ನಿರ್ಮಾಪಕನ ಬಂಧನವಾಗುತ್ತಿದ್ದಂತೆ ಸಿನಿಮಾ ಕೆಲಸಗಳು ಕೂಡ ಅರ್ಧಕ್ಕೆ ನಿಂತಿವೆ.