ಕಾಂತಾರ ನೃತ್ಯ ಕಲಾವಿದರಿದ್ದ ಮಿನಿ ಬಸ್ ಪಲ್ಟಿ; ಹಲವರಿಗೆ ಗಾಯ.

33

ಉಡುಪಿ: ಕಾಂತಾರ: ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿಗೃಹಕ್ಕೆ ವಾಪಸಾಗುತ್ತಿದ್ದಾಗ ಮಿನಿ ಬಸ್ ಪಲ್ಟಿಯಾಗಿ ಹಲವು ಕಲಾವಿದರು ಗಾಯಗೊಂಡಿರುವ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ನಿನ್ನೆ ರಾತ್ರಿ ಸಂಭವಿಸಿದೆ. ಮುದೂರಿನಲ್ಲಿ ನೃತ್ಯ ಚಿತ್ರೀಕರಣ ಮುಗಿಸಿ ಸುಮಾರು 20ಕ್ಕೂ ಹೆಚ್ಚು ಕಿರಿಯ ನೃತ್ಯ ಕಲಾವಿದರು ತಮ್ಮ ವಸತಿಗೃಹಕ್ಕೆ 407 ಬಸ್‍ನಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಗೊಂಡ ಹಲವು ಕಲಾವಿದರಿಗೆ ಜಡ್ಕಲ್ ಮಹಾಲಕ್ಷ್ಮೀ ಕ್ಲಿನಿಕ್‍ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮೊಬೈಲ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಕಲಾವಿದರು ಆರೋಪಿಸಿ, ಚಾಲಕನಿಗೆ ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಟೂರಿಸ್ಟ್ ಚಾಲಕ ಸಂಘದ ಸದಸ್ಯರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕೊಲ್ಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.