ಕುಡಿಯುವ ನೀರಿಗಾಗಿ ಸಹೋದರ ಸಂಬಂಧಿಗಳ ನಡುವೆ ಶುರುವಾದ ಜಗಳ- ಓರ್ವನ ಕೊಲೆಯಲ್ಲಿ ಅಂತ್ಯ…

35
firstsuddi

ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಸಹೋದರ ಸಂಬಂಧಿಗಳ ನಡುವೆ ಶುರುವಾದ ಜಗಳ ಯುವಕನೋರ್ವನ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ.

ನಗರದ ನಂದಕುಮಾರ್ ಕಟ್ಟಿಮನಿ (21) ಕೊಲೆಯಾದ ಯುವಕ. ನಂದಕುಮಾರ್‌ನ ಚಿಕ್ಕಪ್ಪನ ಮಗ ಹನುಮಂತ ಹಾಗೂ ಆತನ ತಾಯಿ ಹನುಮವ್ವ ಕೊಲೆಗೈದ ಆರೋಪಿಗಳಾಗಿದ್ದಾರೆ. ಇಬ್ಬರ ಮನೆಯ ಬಳಿ ಸರ್ಕಾರದ ಕುಡಿಯುವ ನೀರಿನ ನಲ್ಲಿ ಇದೆ. ಈ ನೀರನ್ನು ಎರಡೂ ಕುಟುಂಬದವರೂ ಬಳಸಿಕೊಳ್ಳುತ್ತಿದ್ದರು. ಎಂದಿನಂತೆ ಇಂದು ಸಹ ಹತ್ಯೆಯಾದ ನಂದಕುಮಾರ್‌ನ ಅಜ್ಜಿ ನೀರಿಗೆ ಹೋಗಿದ್ದಾಗ ಎರಡೂ ಕುಟುಂಬದ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಹತ್ಯೆಯಾದ ನಂದಕುಮಾರ್, ಪದವಿ ಪರೀಕ್ಷೆ ಮುಗಿಸಿ ಬಂದ ಬಳಿಕ ಆತನ ಅಜ್ಜಿ ಜಗಳದ ವಿಚಾರ ತಿಳಿಸಿದ್ದು, ಇದನ್ನು ಪ್ರಶ್ನಿಸಲು ಹೋಗಿದ್ದಾಗ ಬಟನ್ ಚಾಕುವಿನಿಂದ ಆರೋಪಿಗಳು ಇರಿದಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಂದಕುಮಾರ್‌ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವಿಗೀಡಾಗಿದ್ದಾನೆ.

ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ, ಡಿವೈಎಸ್‍ಪಿ ಜಾವೇದ್ ಇನಾಮ್ದಾರ್, ಹುಣಸಗಿ ಸಿಪಿಐ ಸಚಿನ್ ಛಲವಾದಿ, ಪಿಎಸ್ಐ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.