ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ನೆನೆದಿದ್ದ ಮನೆಯ ಮೇಲ್ಛಾವಣಿ ನಿನ್ನೆ ತಡರಾತ್ರಿ ಕುಸಿದಿದ್ದು, ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಮಹಾಂತಮ್ಮ ಹೂಗಾರ ಎಂಬ ಅಜ್ಜಿಯನ್ನು ರಕ್ಷಣೆ ಮಾಡಲಾಗಿದೆ.
ಮನೆಯಲ್ಲಿ ಅಜ್ಜಿ ಒಬ್ಬರೇ ವಾಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಭಾರೀ ಮಳೆಯಾಗಿದ್ದು, ಇದರಿಂದ ಮನೆಯ ಮೇಲ್ಛಾವಣಿ ನೆನೆದಿತ್ತು. ಹೀಗೆ ನೆನೆದಿದ್ದ ಮನೆ ನಿನ್ನೆ ರಾತ್ರಿ ಕುಸಿದ ಪರಿಣಾಮ ಮಹಾಂತಮ್ಮ ಮಣ್ಣಲ್ಲಿ ಸಿಲುಕಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಮಹಾಂತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಮಹಾಂತಮ್ಮಳನ್ನ ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










