ಬೆಂಗಳೂರು : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ್ ನಿಧನದಿಂದಾಗಿ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿ ರಾಜಕಾರಣಿ, ಮಾನವೀಯ, ಸ್ನೇಹ, ಪ್ರೀತಿ ಯಾರನ್ನು ನೋವಿಸಬಾರದು ಅಂತ ಗುಣ ಇತ್ತು. ಎಲ್ಲಾ ಸಮಾಜ, ವರ್ಗದವರು ಪ್ರೀತಿಯಿಂದ ನೋಡುತ್ತಿದ್ದರು. ನಮಗೆ ದೊಡ್ಡ ಶಕ್ತಿ ಆಗಿದ್ದರು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ. ನನ್ನ ಕುಟುಂಬವಾಗಿದ್ದರು. ನಮ್ಮ ಪಕ್ಷ ಕಾರ್ಯಕರ್ತರಿಗೆ ದೊಡ್ಡ ಆಸ್ತಿ ಆಗಿದ್ದರು. ಅವರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ರಾಜ್ಯ ಸುತ್ತಿ ಕೆಲಸ ಮಾಡಿದ್ದರು. ಆಕ್ಸಿಜನ್ ದುರಂತದಲ್ಲಿ ತೆಗೆದುಕೊಂಡ ಶ್ರಮ ಬದ್ಧತೆ ಅದನ್ನ ಮರೆಯಲು ಸಾಧ್ಯವಿಲ್ಲ. ದೇವರು ಇಂತಹ ಕ್ರೂರಿ ಆಗಿದ್ದಾನೆ. ದೇವರು ಇದ್ದಾನೋ ಇಲ್ಲವೋ ಅಂತ ಅನ್ನಿಸುತ್ತಿದೆ. ಭಗವಂತ ಅವರ ಕುಟುಂಬಕ್ಕೆ ಅವರ ಅಗಲಿಕೆ ಭರಿಸೋ ಶಕ್ತಿ ಕೊಡಲಿ. ಬಂಧನ, ಸ್ನೇಹ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಸೋನಿಯಾ, ರಾಹುಲ್ ಗಾಂಧಿ, ಖರ್ಗೆ ಫೋನ್ ಮಾಡಿದ್ದರು. ಅವರಿಗೂ ನಂಬೋದಕ್ಕೆ ಆಗ್ತಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ 11 ಗಂಟೆಗೆ ಶ್ರದ್ಧಾಂಜಲಿ ಸಭೆ ಇದೆ. ಶ್ರದ್ಧಾಂಜಲಿ ಸಭೆ ಮುಗಿಸಿ ಮೈಸೂರಿಗೆ ನಾನು ಹೋಗುತ್ತೇನೆ. ಸಂಜೆ ಒಳಗೆ ಅಂತ್ಯಸಂಸ್ಕಾರ ಮಾಡಿ ಅಂತ ನನ್ನ ಅಭಿಪ್ರಾಯ ಹೇಳಿದ್ದೇವೆ. ಇದರ ಬಗ್ಗೆ ಅವರ ಕುಟುಂಬದವರು ಮುಂದಿನ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.










