ಚಿಕ್ಕಮಗಳೂರು : ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಚಿಕ್ಕಮಗಳೂರು ಮೂಲದ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ.
ನಕ್ಸಲ್ ನಾಯಕ ಬಿ.ಜಿ.ಕೃಷ್ಣ ಮೂರ್ತಿ, ಸಾವಿತ್ರಿ ಬಂಧಿತ ನಕ್ಸಲರು. ಬಂಧಿತ ಇಬ್ಬರು ಮಲೆನಾಡ ನಕ್ಸಲಿಸಂನಲ್ಲಿ ಮುಂಚೂಣಿಯಲ್ಲಿದ್ದವರು. ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕ್ಕಡಿ ಬೈಲು ಮೂಲದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ 2003ರಲ್ಲಿ ಭೂಗತನಾಗಿದ್ದು, ತನ್ನ ತಂದೆ ಗೋಪಾಲ್ ರಾವ್ ನಿಧನರಾದಾಗಲೂ ಈತ ಬಂದಿರಲಿಲ್ಲ. ಶೃಂಗೇರಿಯಲ್ಲಿ ಪದವಿ, ಶಿವಮೊಗ್ಗದಲ್ಲಿ ಎಲ್.ಎಲ್.ಬಿ. ಶಿಕ್ಷಣ ಪಡೆದಿದ್ದ ಕೃಷ್ಣಮೂರ್ತಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ವೇಳೆ ನಕ್ಸಲ್ ಸೇರ್ಪಡೆಯಾಗಿದ್ದ. 2003ರಿಂದಲೂ ಕೃಷ್ಣಮೂರ್ತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ಕೃಷ್ಣಮೂರ್ತಿ ವಿರುದ್ಧ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ. ಇನ್ನೂ ಬಂಧಿತ ನಕ್ಸಲ್ ಸಾವಿತ್ರಿ ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆಯ ನಿವಾಸಿ.










