ಚಿಕ್ಕಮಗಳೂರು : ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸರಳ ವಾರ್ಷಿಕ ಗುರು ಪೌರ್ಣಮಿ ಆಚರಣೆ…

252
firstsuddi

ಚಿಕ್ಕಮಗಳೂರು : ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ಗುರು ಪೌರ್ಣಮಿಯನ್ನು ಇಂದು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಉತ್ಸವದ ಪ್ರಯುಕ್ತ ಬೆಳಿಗ್ಗೆ ಬಾಬಾ ಅವರ ವಿಗ್ರಹಕ್ಕೆ ಕಾಕಡಾರತಿ, ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ನಡೆಯಿತು, ನಂತರ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಮಧ್ಯಾಹ್ನ ವಿಶೇಷ ಆರತಿ, ಮಹಾಮಂಗಳಾರತಿ ಜರುಗಿತು.
ಸಂಜೆ ಧೂಪಾರತಿ, ಶೇಜಾರತಿ ನಡೆದವು, ಭಕ್ತರಿಂದ ಭಜನೆ, ನಾಮಸಂಕೀರ್ತನೆ, ಸ್ತ್ರೋತ್ರ ಪಠಣ ನಡೆಯಿತು.
ಗುರು ಪೌರ್ಣಮಿ ಪ್ರಯಕ್ತ ಶ್ರೀ ಸಾಯಿಬಾಬಾ ಅವರ ಮೂಲ ವಿಗ್ರಹದ ಪಾದಸ್ಪರ್ಶಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಬೆಳಗಿನಿಂದ ರಾತ್ರಿವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ಪಾದಸ್ಪರ್ಶಿಸಿ ಧನ್ಯತಾ ಭಾವ ಮೆರೆದರು.
ಇದೇ ವೇಳೆ ಮಾತನಾಡಿದ ಮಂದಿರದ ಮುಖ್ಯ ಟ್ರಸ್ಟಿ ಜಿ.ಎನ್.ಆನಂದಸಾಯಿ, ಪ್ರತಿವರ್ಷ ಗುರು ಪೌರ್ಣಮಿ ಮಹೋತ್ಸವವನ್ನು ಸಹಸ್ರಾರು ಭಕ್ತರೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.