ಮಡಿಕೇರಿ : ಖತರ್ನಾಕ್ ಭಕ್ತೆಯೊಬ್ಬರು ದೇವರಿಗೆ ಕೈಮುಗಿದು ಅರ್ಚಕರ ದಕ್ಷಿಣೆ ತಟ್ಟೆಯಿಂದ ಹಣವನ್ನು ಎಗರಿಸಿರುವ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಾಲಯದಲ್ಲಿ ನಡೆದಿದೆ. ಅಕ್ಟೋಬರ್ 12ರಂದು ಈ ಘಟನೆ ನಡೆದಿದ್ದು, ದಕ್ಷಿಣೆ ತಟ್ಟೆಯಿಂದ ಹಣ ಎಗರಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮೊದಲು ದೇವಾಲಯದ ಒಳಗೆ ಬಂದ ಭಕ್ತೆ ದೇವರಿಗೆ ಕೈ ಮುಗಿದು, ಪ್ರದಕ್ಷಿಣೆ ಹಾಕಿ ಬಂದು ಅರ್ಚಕರು ಗರ್ಭ ಗುಡಿಯಲ್ಲಿ ಇರುವುದನ್ನು ಗಮನಿಸಿ ತಿಳಿಯದಂತೆ ಹಣವನ್ನು ಎಗರಿಸಿ ತಮ್ಮ ಬ್ಯಾಗ್ಗೆ ಹಾಕಿಕೊಂಡಿದ್ದಾರೆ. ಬಳಿಕ ಮತ್ತೊಮ್ಮೆ ದೇವರಿಗೆ ಕೈ ಮುಗಿದು ಕುಂಕುಮ ಪಡೆದುಕೊಂಡು ದಕ್ಷಿಣೆ ತಟ್ಟೆಯಲ್ಲಿ ಇದ್ದ ಹಣವನ್ನು ಮತ್ತೊಮ್ಮೆ ತೆಗೆದು ತನ್ನ ಬ್ಯಾಗ್ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಭಕ್ತೆ ದಕ್ಷಿಣೆ ತಟ್ಟೆಯಿಂದ ಹಣ ತೆಗೆಯುತ್ತಿರುವ ಸಂಪೂರ್ಣ ದೃಶ್ಯ ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.










