ಬೆಂಗಳೂರು: ಸುಪಾರಿ ಕೊಡುವ ಕೆಟ್ಟ ಕೆಲಸ ಏನು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಗೌರವ ಕೊಡುತ್ತೇವೆ ಅಂತ ಬಾಯಿಗೆ ಬಂದಂತೆ ಮಾತಾಡುವುದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಿಮ್ಮ ತಂದೆಯವರು ಏನು ಮಾಡಿದ್ದಾರೆ. ಪೂಜ್ಯ ತಂದೆ ಅಂದುಬಿಟ್ಟ ಮಾತ್ರಕ್ಕೆ ಪೂಜ್ಯ ಆಗಿಬಿಡಲ್ಲ. ನಾವು ಅಂಬೇಡ್ಕರ್, ಬುದ್ದ, ಬಸವ ಮೇಲೆ ನಂಬಿಕೆ ಇಟ್ಟವರು. ನಾವು ಬೀದಿಗೆ ಇಳಿದರೆ ನೀವು ಮನೆ ಖಾಲಿ ಮಾಡಬೇಕಾಗುತ್ತದೆ. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಿ ಎಂದು ಕಿಡಿಕಾರಿದ್ದಾರೆ. ಪ್ರತಿಭಟನೆಗೆ ಬನ್ನಿ ಅಂತಾ ಮೃತ ಗುತ್ತಿಗೆದಾರ ಸಚಿನ್ ಕುಟುಂಬವನ್ನು ಬಿಜೆಪಿಯವರು ಬಲವಂತ ಮಾಡುತ್ತಿದ್ದಾರೆ. ಪದೇ ಪದೆ ಕರೆ ಮಾಡಿ ಸರ್ಕಾರದ ವಿರುದ್ದ ಹೇಳಿಕೆ ಕೊಡಿಸುತ್ತಿದ್ದಾರೆ. ಆಗ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಯವರು ಸಹಾಯ ಮಾಡಬೇಕಿತ್ತು. ಪ್ರಕರಣ ಸಂಬಂಧ ಸಿಐಡಿ ತನಿಖೆ ಶುರುವಾಗಿ ಎರಡು ದಿನಗಳು ಆಗಿದೆ. ಈಗಾಗಲೇ ಮಹಜರು ಮಾಡಿದ್ದಾರೆ. ಪಾರದರ್ಶಕ ತನಿಖೆ ಸರ್ಕಾರದ್ದಾಗಿದೆ. ಸಿಬಿಐ ತನಿಖೆಗೆ ಕೊಡಬೇಕು ಅಂತಾ ಬಿಜೆಪಿಯವರು ಹೇಳಿದಾಗೆಲ್ಲ ಕೇಳಲು ಆಗುವುದಿಲ್ಲ ಎಂದು ತಿಳಿಸಿದರು. ಪಿಎಸ್ಐ ಹಗರಣವನ್ನು ಕೊಟ್ಟಿದ್ದಾರ, ಗಂಗಾ ಕಲ್ಯಾಣ ಹಗರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದಾರ. ಇವರ ಅವಧಿಯಲ್ಲಿ ಎಷ್ಟು ಕೇಸ್ಗಳನ್ನು ಸಿಬಿಐಗೆ ಕೊಟ್ಟಿದ್ದಾರೆ. ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಅಂತಾ ಸಿಬಿಐನವರೇ ಹೇಳಿದ್ದಾರೆ. ಇವರು ಹೇಳಿದಂತೆ ಮಾಡುವುದಕ್ಕೆ ಇರುವುದಾ ನಾವು, ಅವರ ಸ್ಕ್ರಿಫ್ಟ್ಗೆ ನಾವು ಕುಣಿಯುವುದಕ್ಕೆ ಆಗುತ್ತಾ. ಪ್ರತಿಪಕ್ಷದಲ್ಲಿ ಇದ್ದವರು ಜವಾಬ್ದಾರಿಯುತವಾಗಿ ಇರಬೇಕು ಎಂದು ಹೇಳಿದರು.










