ಮೈಸೂರು : ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂದು ಸಂಸದೆ ಶೋಭ ಕರಂದ್ಲಾಜೆ ಅವರು ಮೈಸೂರು ಚಾಮುಂಡೇಶ್ವರಿ ಮೊರೆ ಹೋಗಿದ್ದು, ಇಂದು ಆಷಾಢ ಶುಕ್ರವಾರ ಅಂಗವಾಗಿ ಬರಿಗಾಲಿನಲ್ಲಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ದೇವಾಲಯದಲ್ಲಿ 10 ನಿಮಿಷಗಳ ಕಾಲ ಕುಳಿತು ಯಡಿಯೂರಪ್ಪ ಹಾಗೂ ತಮ್ಮ ಕುಟುಂಬದ ಹೆಸರಿನಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭ ಕರಂದ್ಲಾಜೆ ಅವರು ನಾನು ಈವರೆಗೆ ಚಾಮುಂಡಿ ತಾಯಿಗೆ ಈ ರೀತಿ ಬೇಡಿಕೆ ಇಟ್ಟಿಲ್ಲ. ರಾಜ್ಯದಲ್ಲಿ ಜನವಿರೋಧಿ ಹಾಗೂ ಶಾಸಕ ವಿರೋಧಿ ಪಕ್ಷ ನಿರ್ಮಾಣವಾಗಿದೆ. ಹೀಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು. ಸಿಎಂ ಕುಮಾರಸ್ವಾಮಿ ಅವರು ಮೊದಲು ವಿಶ್ವಾಸಮತ ಸಾಭೀತು ಪಡಿಸುವುದಾಗಿ ತಿಳಿಸಿದ್ದರು. ಆದರೆ ಈಗಾ ಬಹುಮತವನ್ನು ಸಾಭೀತುಪಡಿಸದೆ ಸದನದಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ಗೂ ಬೆಲೆ ಕೊಡುತ್ತಿಲ್ಲ, ರಾಜ್ಯಪಾಲರ ಮಾತಿಗೂ ಬೆಲೆ ಕೊಡುತ್ತಿಲ್ಲ. ಎಷ್ಟು ದಿನ ಈ ರೀತಿ ಡ್ರಾಮಾ ಮಾಡಲು ಸಾಧ್ಯ ಎಂದು ಹೇಳಿದರು.










