ಹೈದರಾಬಾದ್ : ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ 18 ಬಾರಿ ಚಾಕುವಿನಿಂದ ಇರಿದಿರುವ ಘಟನೆ ಇಲ್ಲಿನ ಎಲ್ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸವರಾಜ್ ಕೃತ್ಯ ಎಸಗಿದ ಆರೋಪಿ. ವಿಕಾರಾಬಾದ್ ಜಿಲ್ಲೆಯ ದೌಲ್ತಾಬಾದ್ ತಾಲೂಕಿನ ಗ್ರಾಮವೊಂದರ ನಿವಾಸಿ 20 ವರ್ಷದ ಸಿರಿಷಾ ಎಂಬಾಕೆ ತಿಮ್ಮರೆಡ್ಡಿಪಲ್ಲಿ ಗ್ರಾಮದಲ್ಲಿ ವಾಸಿಸುವ ಬಸವರಾಜ್ (23) ಪ್ರೀತಿಸುತ್ತಿದ್ದರು. ಆದರೆ ಸಿರಿಷಾ ಕಳೆದ ಎರಡು ತಿಂಗಳ ಹಿಂದೆ ಶ್ರೀಧರ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಆಗಿದ್ದಾರೆ.
ಯುವತಿ ಎಲ್ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಸ್ತಿನಾಪುರಂನಲ್ಲಿರುವ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು. ಬುಧವಾರ ಯುವತಿ ಇದ್ದ ಸ್ಥಳಕ್ಕೆ ತೆರಳಿದ್ದ ಬಸವರಾಜ್ ತನ್ನನ್ನು ಮದುವೆಯಾಗುವಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ, ಯುವತಿ ಬಸವರಾಜ್ ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಸವರಾಜ್ ಆಕೆಗೆ 18 ಬಾರಿ ಚಾಕುವಿನಿಂದ ತಿವಿದು ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಎಲ್ಬಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.










