ಮೂಡಿಗೆರೆ : ಸಂತೆ ಮೈದಾನದಲ್ಲಿ ಮಧ್ಯದಂಗಡಿ ತೆರೆಯದಂತೆ ಎಬಿವಿಪಿ ವತಿಯಿಂದ ತಹಸೀಲ್ದಾರರಿಗೆ ಮನವಿ…

282
firstsuddi

ಮೂಡಿಗೆರೆ : ಪಟ್ಟಣದ ಸಂತೆ ಮೈದಾನದಲ್ಲಿ ತೆರೆಯಲು ಸಜ್ಜಾಗಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿ ತೆರೆಯಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದುಗೊಳಿಸುವಂತೆ ಎಬಿವಿಪಿ ವತಿಯಿಂದ ತಹಾಸೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. ಮೂಡಿಗೆರೆ ತಾಲ್ಲೂಕು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಂತೆ ಮೈದಾನದಲ್ಲಿ ಎಂ.ಎಸ್.ಐ.ಎಲ್ ಮಧ್ಯದಂಗಡಿ ತೆರೆಯುವ ಪ್ರಯತ್ನದಲ್ಲಿದ್ದು, ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಎಬಿವಿಪಿ ವಿಭಾಗೀಯ ಸಂಚಾಲಕರಾದ ದೀಕ್ಷಿತ್ ಮೂಡಿಗೆರೆ ಅವರು ಮಾತನಾಡಿ, ಉದ್ದೇಶಿತ ಸ್ಥಳದಲ್ಲಿ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸರ್ಕಾರಿ ಡಿ.ಎಸ್.ಬಿ.ಜಿ ಕಾಲೇಜು, ನಳಂದಾ ಶಾಲೆ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು, ದೇವಾಲಯ ಹಾಗೂ 3 ರಿಂದ 4ಸಾವಿರ ಜನರು ಸೇರುವ ಸಾರ್ವಜನಿಕ ಸಂತೆ ನಡೆಯುವ ಸ್ಥಳ ಇದಾಗಿದ್ದು, ಈ ವಿಚಾರಗಳು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಬೇಸರದ ಸಂಗತಿ. ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಿರುವ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಸದರಿ ಸ್ಥಳದಲ್ಲಿ ಎಂ.ಎಸ್.ಐ.ಎಲ್ ತೆರೆಯಲು ನೀಡಿರುವ ಅನುಮತಿಯನ್ನು ಈ ಕೂಡಲೇ ರದ್ದುಗೊಳಿಸಬೇಕು ಎಂದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಾಸೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ತಾಲ್ಲೂಕು ಸಂಚಾಲಕರಾದ ಕಾರ್ತಿಕ್ ಕುಂದೂರು, ಪ್ರಿಯ, ಚಿರಾಗ್, ಆದಿತ್ಯ, ಸುನೀಲ್ ಸೇರಿದಂತೆ ಇತರರು ಇದ್ದರು.