ದಾವಣಗೆರೆ : ಮೊಬೈಲ್ ಕಳೆದುಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಸಿದ್ದೇಶ್(22) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಸಿದ್ದೇಶ್ ನಿನ್ನೆ ರಾತ್ರಿ ಯಾವುದೋ ಕಾರಣಕ್ಕೆ ತನ್ನ ಪಕ್ಕದ ಮನೆಯವರ ಮೊಬೈಲ್ನ್ನು ಪಡೆದುಕೊಂಡಿದ್ದರು. ಆದರೆ ರಾತ್ರಿಯೇ ಆ ಮೊಬೈಲ್ ಕಳೆದುಕೊಂಡಿದ್ದು, ಮೊಬೈಲ್ ಕಳೆದು ಹೋಗಿರುವ ವಿಷಯ ತಿಳಿದ ಪಕ್ಕದ ಮನೆಯವರು ಸಿದ್ದೇಶ್ ಬಳಿ ಮೊಬೈಲ್ ವಾಪಸ್ ತಂದುಕೊಡುವಂತೆ ಕೇಳಿದ್ದಾರೆ ಅಲ್ಲದೇ ತನ್ನ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಮನೆಯವರಿಗೆ ತಿಳಿದರೆ ಬೈಯುತ್ತಾರೆ ಎಂಬ ಕಾರಣಕ್ಕೆ ಇಂದು ಬೆಳಿಗ್ಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.










