ಯುವಕನ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ…

49
firstsuddi

ಬೆಳಗಾವಿ: ಜಿಲ್ಲೆಯ ಮಾರಿಹಾಳ ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಸುಳೇಭಾವಿ ನಿವಾಸಿ ಅಕ್ಷಯ ಕುಮಾರ್ ಕೊಣಕೇರಿ (23), ಮಾರಿಹಾಳ ನಿವಾಸಿ ರಾಜೇಸಾಬ್ ಮುಲ್ಲಾ (23) ಬಂಧಿತ ಆರೋಪಿಗಳು. ನಿನ್ನೆ ಬೆಳಗ್ಗೆ ಮಾರಿಹಾಳ ಸರ್ಕಾರಿ ಶಾಲೆಯ ಕೊಠಡಿ ಎದುರು ಮಹಾಂತೇಶ ಕರಲಿಂಗಣ್ಣವರ್ (24) ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮಾರಿಹಾಳ ಪೊಲೀಸರು ತನಿಖೆ ಕೈಗೊಂಡಿದ್ದರು.

ನಾಲ್ಕು ದಿನಗಳ ಹಿಂದೆ ಕೊಲೆಯಾದ ಮಹಾಂತೇಶ ಹಾಗೂ ಆರೋಪಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಕೊಲೆಯಾದ ಮಹಾಂತೇಶ್ ರಾಜೇಸಾಬ್‌ಗೆ ಧಮ್ಕಿ ಹಾಕಿದ್ದ. ಇದೇ ವೈಷಮ್ಯವಿಟ್ಟುಕೊಂಡು ಇಬ್ಬರು ಆರೋಪಿಗಳು ಮೇ 18ರ ರಾತ್ರಿ ಶಾಲಾ ಕೊಠಡಿ ಎದುರು ಕುಳಿತಿದ್ದ ಮಹಾಂತೇಶ್‌ನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇದೀಗ ಘಟನೆ ನಡೆದು ಕೇವಲ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಮಾರಿಹಾಳ ಪೊಲೀಸರು ಯಶಸ್ವಿಯಾಗಿದ್ದಾರೆ.