ಅಯೋಧ್ಯ : ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿಲಾನ್ಯಾಸವನ್ನು ನೆರವೇರಿಸಿದರು. ಶಿಲಾನ್ಯಾಸಕ್ಕೆಂದು ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಇತಿಹಾಸ ಪ್ರಸಿದ್ಧ 10ನೇ ಶತಮಾನದ ಪುರಾತನ ಹನುಮಾನ್ ಗಢಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಮಯದಲ್ಲಿ ರಾಜ್ಯದ ಪ್ರತಿಷ್ಠಿತ ಆದಿಚುಚಂಚನಗಿರಿ ಮಠದ ಮಠಾಧೀಶರಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾಧು, ಸಂತರು ಹಾಗೂ ಸ್ವಾಮೀಜಿಗಳು ಭಾಗಿಯಾಗಿದ್ದರು. ಬಳಿಕ ದೇವಾಲಯದ ಪ್ರಧಾನ ಅರ್ಚಕರು ಮೋದಿ ಅವರಿಗೆ ಬೆಳ್ಳಿ ಮುಕುಟವನ್ನು ಪ್ರದಾನ ಮಾಡಿದರು.
ಬಳಿಕ ಮಧ್ಯಾಹ್ನ 12ಗಂಟೆಗೆ ರಾಮಮಂದಿರ ಗರ್ಭಗುಡಿಯ ಸ್ಥಾನದಲ್ಲಿ ಶಿಲಾನ್ಯಾಸ ಪೂಜಾಕಾರ್ಯದಲ್ಲಿ ಭಾಗಿಯಾಗಿ ಬೆಳ್ಳಿ ಗುದ್ದಲಿಯನ್ನು ಸ್ಪರ್ಶಿಸುವ ಮೂಲಕ ಶಿಲಾನ್ಯಾಸವನ್ನು ನೆರವೇರಿಸಿದರು. ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ಕೆ ರಾಮ ಭಕ್ತರು ಪ್ರಪಂಚದ ವಿವಿಧ ಭಾಗಗಳಿಂದ ಕಳುಹಿಸಿದ್ದ 9 ಇಟ್ಟಿಗೆಗಳನ್ನು ಬಳಸಲಾಯಿತು. ಹಾಗೂ ಸುಮಾರು 2000 ಪುಣ್ಯ ಕ್ಷೇತ್ರಗಳಿಂದ ಪವಿತ್ರ ಮಣ್ಣು ಹಾಗೂ 100 ನದಿಗಳಿಂದ ಸಂಗ್ರಹಿಸಿದ ಜಲವನ್ನು ಪೂಜೆಯ ವೇಳೆ ಬಳಸಲಾಯಿತು.










