ಬೆಂಗಳೂರು : ವಂಚನೆ ಪ್ರಕರಣ ಆರೋಪದಡಿ ಮಾಜಿ ಕಾರ್ಪೊರೇಟರ್ವೊಬ್ಬರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
2015 ರಿಂದ 20ರವರೆಗೆ ಬಿಟಿಎಂ ವಾರ್ಡ್ ನ ಜೆಡಿಎಸ್ ಕಾರ್ಪೊರೇಟರ್ ಹಾಗೂ ಹಾಲಿ ಬಿಜೆಪಿ ಮುಖಂಡರಾಗಿರುವ ದೇವದಾಸ್, ಕಳೆದ 2 ವರ್ಷಗಳ ಹಿಂದೆ ಮದನಪಲ್ಲಿ ವಿಧಾನಸಭಾಕ್ಷೇತ್ರದ ಶಾಸಕ ಮೊಹಮ್ಮದ್ ನವಾಜ್ ಪಾಷಾ ಅವರಿಗೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿದ್ದರು. ಇದಕ್ಕಾಗಿ 1 ಕೋಟಿ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಆದರೆ ದೇವದಾಸ್ ಅವರು ಇತ್ತ ಸೈಟ್ ಕೊಡಿಸದೇ, ಹಣವನ್ನೂ ಹಿಂತಿರುಗಿಸದೇ ಸತಾಯಿಸುತ್ತಿದ್ದರು. ಈ ಹಿನ್ನಲೆ ದೇವದಾಸ್ ವಿರುದ್ಧ ಮೊಹಮ್ಮದ್ ನವಾಜ್ ಪಾಷಾ ವಂಚನೆ ದೂರು ದಾಖಲಿಸಿದ್ದರು. ಇದೀಗ ದೇವದಾಸ್ ಅವರನ್ನು ಇಂದು ಬಂಧಿಸಲಾಗಿದೆ.










