ಬೆಂಗಳೂರು: ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನೈತಿಕ ಸಂಬಂಧದ ವಿಚಾರಕ್ಕೆ ಬರ್ಬರ ಕೊಲೆಯಾದ ಯುವಕನನ್ನು ಪ್ರದೀಪ್ (27) ಎಂದು ಗುರುತಿಸಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಯುವಕನಿಗೆ ಈಗಾಗಲೇ ಹಲವು ಬಾರಿ ಮನೆಯವರು ಬುದ್ಧಿವಾದ ಹೇಳಿದ್ದರು. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಠಾಣೆಯಲ್ಲಿಯೇ 2 ಬಾರಿ ವಿವಾಹಿತ ಮಹಿಳೆ ಹಾಗೂ ಯುವಕನ ನಡುವೆ ಅನೈತಿಕ ಸಂಬಂಧ ಮುಂದುವರೆಸದಂತೆ ರಾಜಿ ಪಂಚಾಯಿತಿ ಮಾಡಲಾಗಿತ್ತು. ಆದರೂ, ಹಠಕ್ಕೆ ಬಿದ್ದು ವಿವಾಹಿತ ಆಂಟಿಯೊಂದಿಗೆ ಸಂಬಂಧವನ್ನು ಬೆಳೆಸಿದ್ದ ಆಂಟಿ ಲವರ್ ಈಗ ಬೀದಿ ಹೆಣವಾಗಿ ಬಿದ್ದಿದ್ದಾನೆ.
ನಿನ್ನೆ ತಡರಾತ್ರಿ ಮಾತುಕತೆ ನಡೆಸುವುದಕ್ಕೆ ಕರೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳನ್ನು ಮಹಿಳೆಯ ಗಂಡ ವೆಂಕಟೇಶ್ ಹಾಗೂ ಆತನ ಸ್ನೇಹಿತ ಕೋಳಿ ನಾಗೇಶ್ ಎಂದು ಗುರುತಿಸಲಾಗಿದೆ. ಮಚ್ಚಿನೇಟು ತಿಂದ ಯುವಕ ಬಡಾವಣೆಯಿಂದ ಸುಮಾರು 1 ಕಿ.ಮೀ. ದೂರದಷ್ಟು ಗ್ರಾಮದ ಕಡೆಗೆ ಓಡಿ ಬಂದಿದ್ದಾನೆ. ಆದರೆ, ಅಟ್ಟಾಡಿಸಿಕೊಂಡು ಬಂದ ರೌಡಿಗಳು ಆತನ ಕೈಕಾಲು ಕಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










