ಹಾವೇರಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ 98 ವರ್ಷ ವೃದ್ಧೆ ಪತ್ತೆಯಾಗಿದ್ದಾರೆ.
ಏಳು ಎಕರೆ ಆಸ್ತಿಗಾಗಿ ಇದೇ ತಿಂಗಳು ಡಿಸೆಂಬರ್ 14 ರಂದು ವೃದ್ಧೆ ದೇವಕ್ಕನನ್ನ ಅಪಹರಣ ಮಾಡಿದ್ದರು. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಿನ್ನೆ ತಡರಾತ್ರಿ ಆರೋಪಿಗಳು ವೃದ್ಧೆಯನ್ನ ಗ್ರಾಮಕ್ಕೆ ತಂದು ಬಿಟ್ಟು ಹೋಗಿದ್ದಾರೆ. ಸದ್ಯ ಅಜ್ಜಿ ಆಡೂರು ಪೊಲೀಸ್ ಠಾಣೆಯಲ್ಲಿದ್ದಾರೆ.
ಪ್ರಕರಣದ ಹಿನ್ನಲೆ :
ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನು ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ದೇವಕ್ಕ ಬರೆದು ಕೊಟ್ಟಿದ್ದರು. ಮಾಣಿಕಪ್ಪ ಕುಟುಂಬಸ್ಥರು ಹಲವು ವರ್ಷಗಳಿಂದ ದೇವಕ್ಕ ಅವರನ್ನು ನೋಡಿಕೊಳ್ಳುತ್ತಿದ್ದರು. ಆಸ್ತಿ ಕೊಟ್ಟಿದ್ದಕ್ಕೆ ದೇವಕ್ಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಮಾಣಿಕಪ್ಪನ ಮನೆಯವರು ಜಮೀನಿಗೆ ಹೋಗಿದ್ದ ವೇಳೆ ವೃದ್ಧೆಯನ್ನ ಆರೋಪಿಗಳು ಹುಡುಕಾಡಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವೃದ್ಧೆಯ ಸಂಬಂಧಿಕರಾದ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.










