ತುಮಕೂರು: ನೀರಿನ ಗುಂಡಿಗೆ ಬಿದ್ದು ಎರಡು ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ. ಭರತ್ (2) ಮತ್ತು ಧನುಷ್ (2) ಮೃತಪಟ್ಟ ಮಕ್ಕಳು. ತುರುವೇಕೆರೆ ತಾಲೂಕು ಗೊಲ್ಲರಹಟ್ಟಿಯ ಶಂಕ್ರಪ್ಪ ಮತ್ತು ವನಿತಾ ದಂಪತಿಯ ಮಗ ಭರತ್ ಹಾಗೂ ತಿಪಟೂರು ತಾಲೂಕಿನ ಗೊಲ್ಲರಹಟ್ಟಿಯ ಲಕ್ಷ್ಮೀ ಮತ್ತು ಪರಮೇಶ್ ದಂಪತಿ ಮಗ ಧನುಷ್ ಎಂದು ತಿಳಿದುಬಂದಿದ್ದು, ಎರಡು ಮಕ್ಕಳನ್ನು ಪೋಷಕರು ಅಜ್ಜಿ ಮನೆಗೆ ಕರೆದುಕೊಂಡು ಬಂದಿದ್ದರು. ಮನೆಯ ಬಳಿ ನೀರಿನ ತೊಟ್ಟಿ ನಿರ್ಮಿಸುವುದಕ್ಕಾಗಿ ಸುಮಾರು 10 ಅಡಿ ಆಳದ ಗುಂಡಿಯನ್ನು ತೋಡಲಾಗಿತ್ತು. ಗುಂಡಿಯ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










