ಮೂಡಿಗೆರೆ: ಹೆಸಗಲ್ ಪಂಚಾಯತ್ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಹಣ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದ ಶಾಸಕ ಎಂ.ಪಿ ಕುಮಾರಸ್ವಾಮಿ…

436
firstsuddi

ಮೂಡಿಗೆರೆ: ತಾಲ್ಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ ಬಿಳಗುಳದಲ್ಲಿ ನಡೆದ ಗ್ರಾಮ ಪಂಚಾಯಿತಿಯ ವಿವಿಧ ಅಭಿವೃದ್ದಿ ಕಾರ್ಯಗಳ ಗುದ್ದಲಿ ಪೂಜೆ, ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರದ ಶಂಕುಸ್ಥಾಪನ ಕಾರ್ಯಕ್ರಮವು ನಡೆಯಿತು.

firstsuddi

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರಾದ ಎಂ.ಪಿ ಕುಮಾರಸ್ವಾಮಿಯವರು ಪಂಚಾಯಿತಿಯ ಸರ್ವಾಂಗಿಣ ಅಭಿವೃದ್ಧಿಗೆ ಅನುದಾನ ನೀಡುವುದರ ಬಗ್ಗೆ ಮಾತನಾಡುತ್ತ ಗಿರಿಜನ ಉಪಯೋಜನೆಯಡಿಯಲ್ಲಿ ಸುಮಾರು 70 ಲಕ್ಷಗಳು, ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ಸುಮಾರು 50 ಲಕ್ಷಗಳು ಅನುದಾನ ನೀಡಿದ್ದು, ಹೊಸದಾಗಿ ನಿರ್ಮಾಣ ಮಾಡಲು ಮುಂದಾಗಿರುವ ಪಂಚಾಯತ್ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಹಣ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು. ಹಾಗೂ ಬಿಳಗುಳ ನೀರು ಸಮಸ್ಯೆ ನೀಗಿಸಲು ಬೃಹತ್ ನೀರಾವರಿ ಯೋಜನೆಯನ್ನು ರೂಪಿಸುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್ ಅವರು ಮಾತನಾಡಿ ದಶಕಗಳ ಇತಿಹಾಸವಿರುವ ಹೆಸಗಲ್ ಗ್ರಾಮ ಪಂಚಾಯಿತಿಯ ಸುಸಜ್ಜಿತ ಕಟ್ಟಡವಿಲ್ಲದಿರುವುದು ಶೋಚನೀಯ ಸಂಗತಿ. ಸುಸಜ್ಜಿತ ಪಂಚಾಯಿತಿಯ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದು ತುಂಬಾ ಸಂತಸವಾಗಿದೆ. ತಮ್ಮ ಈ ಕೆಲಸಕ್ಕೆ ನನ್ನ ಸಹಕಾರ ಸದಾವಿರುತ್ತದೆ ಎಂದರು.

ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ  ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವಿಷಯ ತಿಳಿದು ಅವರಿಗೆ ಸಂತಾಪ ಸೂಚಿಸಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ ರತನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧಾ ಯೋಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತ, ಉಪಾಧ್ಯಕ್ಷರಾದ ಜುಬೇದಾ, ಸದಸ್ಯರಾದ ಹೆಚ್.ಎಲ್ ಪ್ರಶಾಂತ್, ಚಂದ್ರಶೇಖರ್, ಗಿರೀಶ್, ಕಾಮಾಕ್ಷಿ, ಅನಿತಾ, ಸತ್ಯನಾರಾಯಣ, ಪೂರ್ಣಿಮಾ,ಮೈದಿನ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹೆಚ್.ಎಸ್.ಎ ಸಲೀಮ್, ಸಿಬ್ಬಂದಿಗಳಾದ, ಸೌಮ್ಯ, ನಜೀರ್, ಜೇನು ಸಹಕಾರ ಸಂಘದ ಅಧ್ಯಕ್ಷರಾದ ಪ್ರಮೋದ್ ದುಂಡುಗ, ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.