ಮಂಡ್ಯ : ಮಗಳು ಫೇಸ್ ಬುಕ್ ಪ್ರಿಯನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಮನನೊಂದ ಅಜ್ಜಿ ಮೊಮ್ಮಗನನ್ನು ಕೆರೆಗೆ ತಳ್ಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಾರುತಿನಗರದಲ್ಲಿ ನಡೆದಿದೆ. ಪ್ರಜ್ವಲ್ (11) ಮೃತ ಬಾಲಕ ಹಾಗೂ ಸಾವಿತ್ರಮ್ಮ ಆತ್ಮಹತ್ಯೆಗೆ ಯತ್ನಿಸಿರುವ ವೃದ್ದೆ ಎನ್ನಲಾಗಿದ್ದು, ಇತ್ತೀಚೆಗೆ ಮಗಳು ಲಕ್ಷ್ಮಿ ಎಂಬುವವರು ತನ್ನ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಇದರಿಂದಾಗಿ ಮಾನಕ್ಕೆ ಅಂಜಿದ ವೃದ್ದೆ ಶಾಲೆಗೆ ಹೋಗಿದ್ದ ಮೊಮ್ಮಗನನ್ನು ಕರೆದುಕೊಂಡು ಬಂದು ಕೆರೆಗೆ ತಳ್ಳಿದ್ದು, ಬಳಿಕ ತಾನೂ ಕೆರೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ವೃದ್ದೆಯನ್ನು ರಕ್ಷಿಸಿದ್ದು, ಮೊಮ್ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ಮೊಮ್ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಕೆ.ಆರ್. ಪೇಟೆ ಪೊಲೀಸರು ವೃದ್ದೆಯನ್ನು ವಶಕ್ಕೆ ಪಡೆದಿದ್ದಾರೆ.










